ಲಖನೌ: ‘ಇಡೀ ರಾಷ್ಟ್ರ ಒಗ್ಗೂಡಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿದೆ. ಆದರೆ, ಉತ್ತರ ಪ್ರದೇಶ ಸರ್ಕಾರವು ವಲಸೆ ಕಾರ್ಮಿಕರಿಗಾಗಿ ಬಸ್, ರೈಲು ಟಿಕೆಟ್, ಆಹಾರ ಮತ್ತು ಪಡಿತರ ವ್ಯವಸ್ಥೆ ಮಾಡುವವರನ್ನು ಜೈಲಿಗಟ್ಟುತ್ತಿದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ಆರೋಪಿಸಿದ್ದಾರೆ.
ವಲಸಿಗ ಕಾರ್ಮಿಕರಿಗೆ 1 ಸಾವಿರ ಬಸ್ಸುಗಳನ್ನು ಒದಗಿಸುವ ಪ್ರಸ್ತಾಪದ ಕುರಿತು ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಮತ್ತು ಕಾಂಗ್ರೆಸ್ ನಡುವೆ ಭಿನ್ನಾಭಿಪ್ರಾಯ ತಾರಕ್ಕೇರಿದ್ದು, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮುಖ್ಯಸ್ಥ ಅಜಯ್ಕುಮಾರ್ ಲಲ್ಲು ಅವರು ಬುಧವಾರ ಎರಡು ಬಾರಿ ಬಂಧನಕ್ಕೊಳಗಾಗಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ,‘ಕೊರೊನಾ ವೈರಸ್ ಸೋಂಕಿನ ವಿರುದ್ಧ ಯೋಗಿ ಆದಿತ್ಯನಾಥ್ ಸರ್ಕಾರ ಹೋರಾಡುತ್ತಿರುವ ವಿಧಾನವನ್ನು ನೋಡಿದ್ದೀರಾ? ವಲಸಿಗರಿಗಾಗಿ ಕಾಂಗ್ರೆಸ್ ಬಸ್ ಸೌಲಭ್ಯ ಕಲ್ಪಿಸಲು ಮುಂದೆ ಬಂದಾಗ ಯೋಗಿ ಸರ್ಕಾರ, ಕಾಂಗ್ರೆಸ್ ಮುಖಂಡರನ್ನು ಜೈಲಿಗೆ ಕಳುಹಿಸಿತು’ ಎಂದು ಆರೋಪಿಸಿದರು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 30ನೇ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ನಮ್ಮ ತಂದೆ ರಾಜೀವ್ ಗಾಂಧಿ ಅವರು ದೇಶಕ್ಕಾಗಿ ಪ್ರಾಣವನ್ನು ನೀಡಿದರು. ಅವರು ಭಾರತ ಮತ್ತು ದೇಶದ ಜನರನ್ನು ಪ್ರೀತಿಸುತ್ತಿದ್ದರು. ದುರ್ಬಲರಿಗೆ ಸಹಾಯ ಮಾಡಬೇ
ಕೆಂಬುದನ್ನು ನಾವು ಅವರಿಂದ ಕಲಿತಿದ್ದೇವೆ’ ಎಂದರು.
ಅಮಾನತು: ಪ್ರಿಯಾಂಕಾ ವಿರುದ್ಧ ಟೀಕೆ ಮಾಡಿದ್ದ ಕಾಂಗ್ರೆಸ್ ಶಾಸಕಿ ಆದಿತಿ ಸಿಂಗ್ ಅವರನ್ನು ಪಕ್ಷವು ಅಮಾನತುಗೊಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.