ADVERTISEMENT

ಉತ್ತರ ಪ್ರದೇಶ: ಲಸಿಕೆ ಪಡೆದಿದ್ದ ವಾರ್ಡ್‌ಬಾಯ್‌ ಸಾವು

ಹೃದಯಾಘಾತದಿಂದ ಸಾವು, ಲಸಿಕೆಗೆ ಸಂಬಂಧವೇ ಇಲ್ಲ– ವೈದ್ಯರ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 8:54 IST
Last Updated 18 ಜನವರಿ 2021, 8:54 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಖನೌ: ಕೋವಿಡ್‌ ಲಸಿಕೆ ಪಡೆದಿದ್ದ ಉತ್ತರ ಪ್ರದೇಶದ ಮೊರದಾಬಾದ್‌ ನಗರದ ಸರ್ಕಾರಿ ಆಸ್ಪತ್ರೆಯ ವಾರ್ಡ್‌ಬಾಯ್‌ ಒಬ್ಬರು ಭಾನುವಾರ ಸಾವಿಗೀಡಾಗಿದ್ದಾರೆ.

‘ಲಸಿಕೆಯಿಂದ ಈ ಸಾವು ಸಂಭವಿಸಿಲ್ಲ. ಹೃದಯಾಘಾತದಿಂದ ವಾರ್ಡ್‌ಬಾಯ್‌ ಸಾವಿಗೀಡಾಗಿದ್ದಾರೆ’ ಎಂದು ಆರೋಗ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮೊರದಾಬಾದ್‌ನ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ವಾರ್ಡ್‌ಬಾಯ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ 46 ವರ್ಷದ ಮಹಿಪಾಲ್‌ ಸಿಂಗ್‌ಗೆ ಶನಿವಾರ ಕೋವಿಡ್‌ ಸಲಿಕೆ ನೀಡಲಾಗಿತ್ತು. ಭಾನುವಾರ ಸಂಜೆ ಅಸ್ವಸ್ಥರಾಗಿದ್ದ ಮಹಿಪಾಲ್‌ ಸಿಂಗ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ADVERTISEMENT

ಮಹಿಪಾಲ್‌ ಸಿಂಗ್‌ ನ್ಯೂಮೊನಿಯದಿಂದ ಬಳಲುತ್ತಿದ್ದರು. ಲಸಿಕೆ ಹಾಕಿದ ಬಳಿಕ ಅವರ ಪರಿಸ್ಥಿತಿ ಗಂಭೀರವಾಯಿತು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

‘ಮಹಿಪಾಲ್‌ ಸಿಂಗ್‌ಗೆ ಉಸಿರಾಟದ ಸಮಸ್ಯೆ ಇತ್ತು. ಕೆಲವರು ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮಹಿಪಾಲ್‌ ಸಿಂಗ್‌ ಹೃದಯಾಘಾತದಿಂದ ಸಾವಿಗೀಡಾಗಿರುವುದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ. ಕೋವಿಡ್‌ ಲಸಿಕೆಗೂ ಸಾವಿಗೂ ಯಾವುದೇ ರೀತಿಯ ಸಂಬಂಧ ಇಲ್ಲ’ ಎಂದು ಮೊರದಾಬಾದ್‌ನ ಮುಖ್ಯ ವೈದ್ಯಾಧಿಕಾರಿ ಎಂ.ಸಿ. ಗಾರ್ಗ್‌ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.