ADVERTISEMENT

ಕೊರೊನಾ ವೈರಸ್‌ ಭೀತಿ: ಕೆಮ್ಮಿದವಗೆ ಗುಂಡೇಟು!

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 3:33 IST
Last Updated 16 ಏಪ್ರಿಲ್ 2020, 3:33 IST
   

ನೊಯ್ಡಾ (ಉತ್ತರ ಪ್ರದೇಶ): ಕೊರೊನಾ ವೈರಸ್‌ ಸೋಂಕು ಜನರಲ್ಲಿ ಎಷ್ಟೊಂದು ಭೀತಿ ಸೃಷ್ಟಿಸಿದೆ ಎಂಬುದಕ್ಕೆ ಕೆಮ್ಮಿದವನಿಗೆ ಗುಂಡು ಹೊಡೆದು ಘಟನೆಯೇ ಸಾಕ್ಷಿಯಾಗಿದೆ.

ಇಲ್ಲಿನ ದಯಾನಗರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗ್ರಾಮದ ದೇವಸ್ಥಾನದ ಆವರಣದಲ್ಲಿ ರಾತ್ರಿ 9 ಗಂಟೆ ಸುಮಾರಿನಲ್ಲಿ ಮೂವರು ಲುಡೊ ಆಟವಾಡುತ್ತಿದ್ದರು. ಅಲ್ಲಿಗೆ ಪ್ರಶಾಂತ್ ಸಿಂಗ್ ಎಂಬ ಯುವಕ ಬಂದು ಆಟವನ್ನು ನೋಡುತ್ತ ನಿಂತಿದ್ದಾರೆ. ಇದೇ ವೇಳೆ ಅವರು ಕೆಮ್ಮಿದ್ದಾರೆ. ಕೊರೊನಾ ಸೋಂಕು ಹರಡುತ್ತಿರುವಾಗ, ಇಲ್ಲಿ ಕೆಮ್ಮಿದ್ದೇಕೆ ಎಂದು ಪ್ರಶಾಂತ್‌ ಸಿಂಗ್‌ನನ್ನು ಆ ಮೂವರು ಪ್ರಶ್ನೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ.

ADVERTISEMENT

ಈ ಹಂತದಲ್ಲಿ ತಾಳ್ಮೆ ಕಳೆದುಕೊಂಡ ಜೈವೀರ್ ಸಿಂಗ್‌ ಎಂಬಾತ ಪಿಸ್ತೂಲ್‌ ತೆಗೆದು ಪ್ರಶಾಂತ್‌ನತ್ತ ಗುಂಡು ಹಾರಿಸಿದ್ದಾನೆ. ಗುಂಡು ಪ್ರಶಾಂತ್‌ಗೆ ತಗುಲಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗಾಯಗೊಂಡಿರುವ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯ ಸ್ಥಿರವಾಗಿದೆ. ಗುಂಡು ಹಾರಿಸಿದ ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.