ಲಖನೌ: ಮುಂಬರುವ ವಿಧಾನಸಭೆ ಚುನಾವಣೆಗೆ ಯೋಗಿ ಆದಿತ್ಯನಾಥ್ ಅವರು ಗೋರಖ್ಪುರದಿಂದ ಸ್ಪರ್ಧಿಸುತ್ತಿರುವುದನ್ನು ಸಮಾಜವಾದಿ ಪಕ್ಷದ(ಎಸ್ಪಿ) ನಾಯಕ ಅಖಿಲೇಶ್ ಯಾದವ್ ಗೇಲಿ ಮಾಡಿದರು.
ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಅವರು, ‘ಈಗ ಯೋಗಿ ಆದಿತ್ಯನಾಥ್ ಗೋರಖ್ಪುರದಿಂದ ಸ್ಪರ್ಧಿಸುತ್ತಿದ್ದಾರೆ. ಮುಂದೆ ಅವರು ಅಲ್ಲಿಯೇ ಉಳಿದುಬಿಡಬಹುದು’ ಎಂದು ತಿಳಿಸಿದರು.
‘ಈ ಬಾರಿ ಸಮಾಜವಾದಿ ಪಕ್ಷವು ಗೋರಖ್ಪುರ ಜಿಲ್ಲೆಯ ಎಲ್ಲಾ ವಿಧಾನಸಭಾ ಸ್ಥಾನಗಳನ್ನು ಗೆಲ್ಲುತ್ತದೆ. ಸ್ವಂತ ನಗರದಲ್ಲಿ ಮೆಟ್ರೊ ಓಡಿಸಲು, ಒಳಚರಂಡಿ ನಿರ್ಮಿಸಲು ಯೋಗಿಗೆ ಸಾಧ್ಯವಾಗಲಿಲ್ಲ. ಈ ಬಾರಿ ಗೋರಖ್ಪುರದ ಜನರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಇಂದು ಬಿಜೆಪಿಯು ಅವರನ್ನು ಮನೆಗೆ ಕಳುಹಿಸಿದೆ. ಮುಂದೆ ಜನರು ಅವರನ್ನು ಮನೆಯಲ್ಲೇ ಉಳಿದುಕೊಳ್ಳುವಂತೆ ಮಾಡಲಿದ್ದಾರೆ’ ಎಂದು ಹೇಳಿದರು.
ಗೋರಖ್ಪುರವು ಯೋಗಿ ಆದಿತ್ಯನಾಥ್ರ ಕರ್ಮಭೂಮಿಯಾಗಿದ್ದು, ಅಲ್ಲಿಂದ ಅವರು ಸತತ ಐದು ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದರು. ಗೋರಖನಾಥ ಮಠದ ಪ್ರಧಾನ ಅರ್ಚಕರಾಗಿಯೂ ಯೋಗಿ ಕಾರ್ಯನಿರ್ವಹಿಸಿದ್ದಾರೆ.
403 ಸದಸ್ಯ ಬಲವನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಫೆಬ್ರುವರಿ 10ರಿಂದ ಮಾರ್ಚ್ 7ರ ವರೆಗೆ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ.
ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.