ADVERTISEMENT

ವೈರಲ್‌ ವಿಡಿಯೊ: ಕೋವಿಡ್ ಪೀಡಿತನ ಶವ ನದಿಗೆ ಎಸೆದ ಬಂಧುಗಳು

ಪಿಟಿಐ
Published 30 ಮೇ 2021, 11:48 IST
Last Updated 30 ಮೇ 2021, 11:48 IST
ಉತ್ತರ ಪ್ರದೇಶದಲ್ಲಿ ಗಂಗಾ ನದಿಯ ಪಾತ್ರದಲ್ಲಿ ವಿವಿಧ ಶವಗಳನ್ನು ಹೂತಿರುವುದು (ಸಂಗ್ರಹ ಚಿತ್ರ)
ಉತ್ತರ ಪ್ರದೇಶದಲ್ಲಿ ಗಂಗಾ ನದಿಯ ಪಾತ್ರದಲ್ಲಿ ವಿವಿಧ ಶವಗಳನ್ನು ಹೂತಿರುವುದು (ಸಂಗ್ರಹ ಚಿತ್ರ)   

ಬಲರಾಂಪುರ್, ಉತ್ತರಪ್ರದೇಶ: ಕೋವಿಡ್‌ ಸೋಂಕಿತ ವ್ಯಕ್ತಿಯ ಶವವನ್ನು ಸೇತುವೆಯಿಂದ ಇಲ್ಲಿನ ರಾಪ್ತಿ ನದಿಗೆ ಎಸೆದ ಆತಂಕಕಾರಿ ಬೆಳವಣಿಗೆ ಈಚೆಗೆ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೊ ವೈರಲ್ ಆಗಿದೆ.

ಸೇತುವೆಯ ಮೇಲಿನಿಂದ ಇಬ್ಬರು ಕೂಡಿ ಶವ ಎಸೆಯುತ್ತಿದ್ದು, ಇವರಲ್ಲಿ ಒಬ್ಬ ಪಿಪಿಇ ಕಿಟ್‌ ಧರಿಸಿದ್ದ. ದಾರಿಹೋಕರು ಇದನ್ನು ಚಿತ್ರೀಕರಿಸಿದ್ದಾರೆ. ವಿಡಿಯೊ ಜಾಲತಾಣದಲ್ಲಿ ಕಾಣಿಸಿಕೊಂಡಂತೆ ಪೊಲೀಸರು ಪ್ರಕರಣ ದಾಖಲಿಸಿ ಕಾರ್ಯಪ್ರವೃತ್ತರಾಗಿದ್ದಾರೆ.

ಬಲರಾಂಪುರ್‌ನ ಮುಖ್ಯ ವೈದ್ಯಾಧಿಕಾರಿ ವಿಜಯ್‌ ಬಹಾದ್ದೂರ್ ಸಿಂಗ್ ಅವರು, ‘ಮೃತನನ್ನು ರಾಜ್ಯದ ಸಿದ್ಧಾರ್ಥನಗರ ಜಿಲ್ಲೆಯ ಸೋಹ್ರತ್‌ಗರ್‌ನ ನಿವಾಸಿ ಪ್ರೇಮ್‌ನಾಥ್ ಮಿಶ್ರಾ ಎಂದು ಗುರುತಿಸಲಾಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಕೋವಿಡ್‌ ದೃಢಪಟ್ಟಿದ್ದ ಮಿಶ್ರಾ ಅವರನ್ನು ಮೇ 25ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. 28ರಂದು ಮೃತಪಟ್ಟಿದ್ದರು. ಕೋವಿಡ್ ಶಿಷ್ಟಾಚಾರದಂತೆಶವವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿತ್ತು’ ಎಂದು ವಿವರಿಸಿದ್ದಾರೆ. ಈ ಸಂಬಂಧ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದೂ ತಿಳಿಸಿದ್ದಾರೆ.

ಕಳೆದ ತಿಂಗಳು ಗಂಗಾ, ಯಮುನಾ ನದಿಯಲ್ಲಿ ಅನೇಕ ಶವಗಳು ತೇಲಿಬಂದಿದ್ದವು. ಇವು ಕೋವಿಡ್‌ ಪೀಡಿತರ ಶವಗಳು ಎಂಬುದು ಆತಂಕ ಹೆಚ್ಚಿಸಿತ್ತು.

ಈ ಮಧ್ಯೆ ಸ್ಥಳೀಯ ಆಡಳಿತವು, ಶವಗಳನ್ನು ನದಿಗೆ ಎಸೆಯಬಾರದು ಎಂದು ಜನರಿಗೆ ಮನವಿ ಮಾಡಿದೆ.

ಕೇಂದ್ರ ಸೂಚನೆ: ಗಂಗಾ ನದಿ ಪಾತ್ರದಲ್ಲಿ ಅನೇಕ ಶವಗಳನ್ನು ಹೂತಿರುವುದು ಹಾಗೂ ಶವಗಳನ್ನು ನದಿಗೆ ಎಸೆದಿರುವ ಘಟನೆಗಳ ಬೆನ್ನಲ್ಲೇ ಕೇಂದ್ರ ಸರ್ಕಾರ ಇಂಥ ಬೆಳವಣಿಗೆ ತಡೆಯಬೇಕು ಎಂದು ಉತ್ತರದ ರಾಜ್ಯಗಳಿಗೆ ಸೂಚನೆ ನೀಡಿತ್ತು.

ಈ ಸಂಬಂಧ ಬರೆದಿದ್ದ ಪತ್ರದಲ್ಲಿ ಕೇಂದ್ರ ಸರ್ಕಾರವು ನದಿಪಾತ್ರದಲ್ಲಿ ಗಸ್ತು ಬಲಪಡಿಸಬೇಕು. ಜಾಗೃತಿ ಕೊರತೆ ಅಥವಾ ಬಡತನದಿಂದಾಗಿ ನದಿಗೆ ಶವ ಎಸೆಯುವ ಅನುಚಿತ ಕ್ರಮವನ್ನು ತಡೆಯಬೇಕು ಎಂದು ಸಲಹೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.