ADVERTISEMENT

ಯುಪಿ ಮತ್ತೊಂದು ಕೇರಳವಾಗಲಿದೆ: ಯೋಗಿ ಹೇಳಿಕೆಯಲ್ಲೇ ತರ್ಕ ಹುಡುಕಿದ ಶಶಿ ತರೂರ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಫೆಬ್ರುವರಿ 2022, 11:23 IST
Last Updated 10 ಫೆಬ್ರುವರಿ 2022, 11:23 IST
ಶಶಿ ತರೂರ್‌– ಯೋಗಿ ಆದಿತ್ಯನಾಥ್‌
ಶಶಿ ತರೂರ್‌– ಯೋಗಿ ಆದಿತ್ಯನಾಥ್‌   

ನವದೆಹಲಿ: ಉತ್ತರ ಪ್ರದೇಶದ ಪಶ್ಚಿಮ ಭಾಗದ 11 ಜಿಲ್ಲೆಗಳ ಒಟ್ಟು 58 ಕ್ಷೇತ್ರಗಳಿಗೆ ಮತದಾನ ಗುರುವಾರ ನಡೆಯುತ್ತಿದೆ. ಆ ಹಿನ್ನೆಲೆಯಲ್ಲಿ ವಿಡಿಯೊ ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಆದಿತ್ಯನಾಥ್‌ ಅವರು ವಿವಾದದ ಕಿಡಿಯನ್ನು ಹೊತ್ತಿಸಿದ್ದಾರೆ.

‘ಇಂದು ಮತದಾರರು ಎಡವಿದರೆ ಉತ್ತರ ಪ್ರದೇಶವು ಮತ್ತೊಂದು ಕಾಶ್ಮೀರ, ಕೇರಳ ಅಥವಾ ಪಶ್ಚಿಮ ಬಂಗಾಳವಾಗಿ ಬದಲಾಗುತ್ತದೆ’ ಎಂದು ಯೋಗಿ ಆದಿತ್ಯನಾಥ ಹೇಳಿದ್ದಾರೆ.

ತಿರುವನಂತಪುರದ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರು ಯೋಗಿ ಹೇಳಿಕೆಗೆ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಟ್ವೀಟಿಸಿರುವ ಅವರು, ‘ಬಿಜೆಪಿ ಅಧಿಕಾರಕ್ಕೆ ಬರದಿದ್ದರೆ ಉತ್ತರ ಪ್ರದೇಶವು ಕಾಶ್ಮೀರ, ಬಂಗಾಳ ಅಥವಾ ಕೇರಳವಾಗಿ ಬದಲಾಗುತ್ತದೆ ಎಂದು ಮತದಾರರಿಗೆ ಯೋಗಿ ಹೇಳಿದ್ದಾರೆ. ಒಂದು ವೇಳೆ ಇದು ಸಂಭವಿಸಿದರೆ, ಉತ್ತರ ಪ್ರದೇಶವನ್ನು ಅದೃಷ್ಟವಂತ ರಾಜ್ಯವೆಂದೇ ಕರೆಯಬಹುದು. ಕಾಶ್ಮೀರದ ಸೌಂದರ್ಯ, ಬಂಗಾಳದ ಸಂಸ್ಕೃತಿ ಮತ್ತು ಕೇರಳದ ಶಿಕ್ಷಣವು ಯುಪಿಯನ್ನು ಅದ್ಭುತ ಸ್ಥಳವನ್ನಾಗಿ ಮಾಡುತ್ತವೆ’ ಎಂದು ಹೇಳಿದ್ದಾರೆ.

ADVERTISEMENT

ಉತ್ತರ ಪ್ರದೇಶ ಅದ್ಭುತವಾಗಿದೆ, ಆದರೆ, ಅಲ್ಲಿನ ಸರ್ಕಾರದ ಬಗ್ಗೆ ಕನಿಕರವಿದೆ ಎಂದೂ ಶಶಿ ತರೂರ್‌ ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.