ಲಖನೌ: ಕಾನ್ಪುರ್ನಲ್ಲಿ ಧೈರ್ಯದಿಂದ ತಮ್ಮ ಕರ್ತವ್ಯ ನಿಭಾಯಿಸಿ ಹುತಾತ್ಮರಾದ ಪೊಲೀಸರನ್ನು ಉತ್ತರ ಪ್ರದೇಶದ ಜನತೆ ಮರೆಯುವುದಿಲ್ಲ. ಅವರ ಬಲಿದಾನ ವ್ಯರ್ಥವಾಗುವುದಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.
ಗುರುವಾರ ಮಧ್ಯರಾತ್ರಿ ವಿಕಾಸ್ ದುಬೆ ಎಂಬ ಕುಖ್ಯಾತ ರೌಡಿ ಶೀಟರ್ನ್ನು ಬಂಧಿಸಲು ಹೋದಾಗ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ 8 ಮಂದಿ ಪೊಲೀಸರು ಮೃತಪಟ್ಟಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ. ಇಬ್ಬರು ದುಷ್ಕರ್ಮಿಗಳನ್ನು ಎನ್ಕೌಂಟರ್ ಮಾಡಲಾಗಿದೆ. ಪೊಲೀಸರ ಮೇಲೆ ದಾಳಿ ನಡೆಸಿದ ಪ್ರದೇಶದಿಂದ ಆಯುಧಗಳನ್ನು ನಾವು ವಶಪಡಿಸಿಕೊಂಡಿದ್ದೇವೆ. ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ ಎಂದು ಕಾನ್ಪುರ್ ಐಜಿ ಮೋಹಿತ್ ಅಗರವಾಲ್ ಹೇಳಿದ್ದಾರೆ.
ಇದನ್ನೂ ಓದಿ:ಕಾನ್ಪುರ್: ರೌಡಿಶೀಟರ್ಗಳಿಂದ ಪೊಲೀಸರ ಮೇಲೆ ಗುಂಡಿನ ದಾಳಿ, 8 ಪೊಲೀಸರ ಹತ್ಯೆ
ಟ್ವಿಟರ್ನಲ್ಲಿ ವಿಕಾಸ್ ದುಬೆ ಟ್ರೆಂಡಿಂಗ್
60 ಅಪರಾಧ ಕೃತ್ಯಗಳಲ್ಲಿ ಆರೋಪಿಯಾಗಿರುವ ರೌಡಿ ಶೀಟರ್ ವಿಕಾಸ್ ದುಬೆಯ ಗ್ಯಾಂಗ್ ಪೊಲೀಸರ ಮೇಲೆ ದಾಳಿ ನಡೆಸಿದ್ದು ಟ್ವಿಟರ್ನಲ್ಲಿ ವಿಕಾಸ್ ದುಬೆ ಹೆಸರು ಟ್ರೆಂಡ್ ಆಗಿದೆ.
ಪೊಲೀಸ್ ಠಾಣೆಯೊಳಗೆ ರಾಜ್ಯ ಸಚಿವರನ್ನು ಹತ್ಯೆ ಮಾಡಿದ ಪ್ರಕರಣದ ಆರೋಪಿಯಾಗಿರುವ ವಿಕಾಸ್ ದುಬೆಗೆ ಕೆಲವೇ ವಾರಗಳಲ್ಲಿ ಜಾಮೀನು ನೀಡಲಾಗಿತ್ತು,. ಈ ಪವಾಡ ಮಾಡಿದ ನ್ಯಾಯಾಧೀಶರ ಹೆಸರು ಮತ್ತು ಹಿನ್ನೆಲೆ ಅರಿಯಲು ಇಚ್ಛಿಸುತ್ತೇನೆ ಎಂದು ವಕೀಲ ದಿವ್ಯ ಕುಮಾರ್ ಸೋಟಿ ಟ್ವೀಟಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.