ADVERTISEMENT

ಟ್ರಾಫಿಕ್ ಹೆಡ್ ಕಾನ್‌ಸ್ಟೇಬಲ್‌ನಿಂದ ನಿರಂತರ ಅತ್ಯಾಚಾರ, ಮಹಿಳೆ ಆತ್ಮಹತ್ಯೆ ಯತ್ನ

ಪಿಟಿಐ
Published 13 ಸೆಪ್ಟೆಂಬರ್ 2021, 16:15 IST
Last Updated 13 ಸೆಪ್ಟೆಂಬರ್ 2021, 16:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಾನ್ಪುರ: ಕಳೆದ ಎರಡು ವರ್ಷಗಳಿಂದ ತನ್ನ ಚಿಕ್ಕಪ್ಪ, ಸಂಚಾರ ಪೊಲೀಸ್‌ ಕಾನ್‌ಸ್ಟೇಬಲ್‌ನಿಂದ ಪದೇ ಪದೆ ಅತ್ಯಾಚಾರಕ್ಕೊಳಗಾಗಿದ್ದ 25 ವರ್ಷದ ಮಹಿಳೆ ಗಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಭಾನುವಾರ ಸಂಜೆ ಆಕೆಯನ್ನು ಚಾಲಕರು ಮತ್ತು ಪೊಲೀಸ್ ಸಿಬ್ಬಂದಿ ರಕ್ಷಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಪೂರ್ವ) ಪ್ರಮೋದ್ ಕುಮಾರ್ ತಿಳಿಸಿದ್ದಾರೆ.

ಮಹಿಳೆ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆದರೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಮಿರ್ಜಾಪುರ ಜಿಲ್ಲೆಯ ನಿವಾಸಿಯಾದ ಮಹಿಳೆ, ಟ್ರಾಫಿಕ್ ಹೆಡ್ ಕಾನ್ಸ್‌ಟೇಬಲ್ ಆಗಿರುವ ತನ್ನ ಚಿಕ್ಕಪ್ಪ 2019ರ ಜನವರಿಯಲ್ಲಿ ಕುಂಭ ಮೇಳದಲ್ಲಿ ಭಾಗಿಯಾಗಲು ಆಕೆಯ ಕುಟುಂಬವನ್ನು ಅಲಹಾಬಾದ್‌ಗೆ ಕರೆಸಿಕೊಂಡಿದ್ದರು. ಆಕೆ ಅಲಹಾಬಾದ್‌ನಲ್ಲಿ ತಂಗಿದ್ದಾಗ, ಅವಳ ಚಿಕ್ಕಪ್ಪ ಆಕೆಯನ್ನು ಹೋಟೆಲ್‌ಗೆ ಕರೆದೊಯ್ದಿದ್ದಾರೆ. ನಿದ್ದೆ ಬರುವ ಔಷಧವನ್ನು ತಂಪು ಪಾನೀಯದೊಂದಿಗೆ ಬೆರೆಸಿ ನೀಡಿದ್ದಾರೆ. ಆಕೆ ಪ್ರಜ್ಞೆ ತಪ್ಪಿದಾಗ, ಅತ್ಯಾಚಾರ ಎಸಗಿದ್ದಾರೆ. ಬ್ಲ್ಯಾಕ್ ಮೇಲ್ ಮಾಡಲು ವಿಡಿಯೊ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ತನ್ನ ಚಿಕ್ಕಪ್ಪ ಅಲಹಾಬಾದ್ ಮತ್ತು ಕಾನ್ಪುರದಲ್ಲಿ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ. ಆಕೆ ಗರ್ಭಿಣಿಯಾಗಿದ್ದಾಳೆ ಎಂಬುದನ್ನು ತಿಳಿದಾಗ, ಗರ್ಭ ನಿರೋಧಕ ಮಾತ್ರೆ ನೀಡಿದ್ದಾರೆ ಎಂದು ಡಿಸಿಪಿ ಹೇಳಿದ್ದಾರೆ.

ಭಾನುವಾರ ಆರೋಪಿ ಮತ್ತು ಆತನ ಮಗ ಆಕೆಯನ್ನು ಕಾನ್ಪುರದ ಚಕೇರಿ ಪ್ರದೇಶದ ಕೋಣೆಯೊಂದಕ್ಕೆ ಕರೆದೊಯ್ದಿದ್ದಾರೆ. ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡಲು ಮತ್ತೊಂದು ವಿಡಿಯೊ ಮಾಡಿದ್ದಾರೆ. ಇದಕ್ಕೆ ಆಕೆ ವಿರೋಧ ತೋರಿದಾಗ ಅವಳನ್ನು ಹೊಡೆಯಲು ಪ್ರಾರಂಭಿಸಿದ್ದಾರೆ ಮತ್ತು ಹೆದರಿಸಿದ್ದಾರೆ. ಅವರಿಂದ ತಪ್ಪಿಸಿಕೊಂಡ ನಂತರ, ಆಕೆಯು ಪೋಲಿಸ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ನದಿಗೆ ಹಾರಿದ್ದಾಳೆ. ಆದರೆ ಪಿಆರ್‌ವಿ ಸಿಬ್ಬಂದಿ ಆಕೆಯನ್ನು ರಕ್ಷಿಸಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.

ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತೆ ಹೇಳಿಕೆ ನೀಡಿದ ನಂತರ ಕಾನ್‌ಸ್ಟೇಬಲ್‌ ಅನ್ನು ಅಮಾನತುಗೊಳಿಸಲಾಗುವುದು ಎಂದು ಡಿಸಿಪಿ (ಟ್ರಾಫಿಕ್) ಬಿಬಿಜಿಟಿಎಸ್ ಮೂರ್ತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.