ಡೆಹ್ರಾಡೂನ್: ಉತ್ತರಾಖಂಡದಲ್ಲಿ ಭಾನುವಾರ ಸಂಭವಿಸಿದ ಭೀಕರ ಹಿಮನದಿ ಸ್ಫೋಟದ ಬಳಿಕ ಕಣ್ಮರೆಯಾದವರ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಈವರೆಗೆ 15 ಮಂದಿಯನ್ನು ರಕ್ಷಣೆ ಮಾಡಲಾಗಿದೆ. 14 ಮಂದಿಯ ಮೃತದೇಹ ಪತ್ತೆಯಾಗಿದೆ ಎಂದು ಚಮೋಲಿ ಪೊಲೀಸರು ತಿಳಿಸಿದ್ದಾರೆ.
ಕರ್ಣಪ್ರಯಾಗ್ ಮಾರ್ಗದಿಂದ 7 ಹಾಗೂ ತಪೋವನ ಪ್ರದೇಶದಿಂದ 3 ಮೃತದೇಹಗಳನ್ನು ಪತ್ತೆಹಚ್ಚಚಲಾಗಿದೆ. ತಪೋವನದ ಸುರಂಗವೊಂದರಿಂದ 12 ಮಂದಿಯನ್ನು ರಕ್ಷಿಸಲಾಗಿದೆ ಎಂದು ಉತ್ತರಾಖಂಡ ಡಿಜಿಪಿ ಅಶೋಕ್ ಕುಮಾರ್ ತಿಳಿಸಿದ್ದಾರೆ.
‘ಭೀತರಾಗುವ ಅಗತ್ಯವಿಲ್ಲ. ಹಿಮನದಿ ಸ್ಫೋಟ ನಿನ್ನೆ (ಭಾನುವಾರ) ಸಂಭವಿಸಿದೆ. ರೈನಿ ವಿದ್ಯುತ್ ಯೋಜನೆ ಪ್ರದೇಶದಲ್ಲಿನ ಪ್ರವಾಹ, ಬಂಡೆಗಳು ಮತ್ತು ಭಗ್ನಾವಶೇಷಗಳು ತಪೋವನ ಪ್ರದೇಶದಲ್ಲಿ ಹಾನಿಗೆ ಕಾರಣವಾಗಿವೆ. ಎಲ್ಲವೂ ನಿನ್ನೆ ನಡೆದಿದೆ’ ಎಂದೂ ಅವರು ತಿಳಿಸಿದ್ದಾರೆ.
ವಿಪತ್ತು ನಿರ್ವಹಣಾ ತಂಡಗಳನ್ನು ಒಳಗೊಂಡ ಎಂಐ–17 ಹಾಗೂ ಎಎಲ್ಎಚ್ ಹೆಲಿಕಾಪ್ಟರ್ಗಳನ್ನು ಡೆಹ್ರಾಡೂನ್ನಿಂದ ಜೋಶಿಮಠದತ್ತ ಕಳುಹಿಸಿಕೊಡಲಾಗಿದೆ. ವೈಮಾನಿಕ ರಕ್ಷಣಾ, ಪರಿಹಾರ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.
ಹಿಮನದಿ ಸ್ಫೋಟದಿಂದ ದಿಢೀರ್ ಪ್ರವಾಹ ಉಂಟಾಗಿತ್ತು. 125 ಮಂದಿ ಕಣ್ಮರೆಯಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.