
ನವದೆಹಲಿ: ದಂಡಕ್ರಮ ಪ್ರಾಣಾಯಾಮದ ಅಂಗವಾಗಿ, ಶುಕ್ಲ ಯಜುರ್ವೇದದ 2000 ಶ್ಲೋಕಗಳನ್ನು ಯಾವುದೇ ಅಡಚಣೆ ಇಲ್ಲದೆ 50 ದಿನಗಳ ಕಾಲ ಪಠಿಸಿ ಪೂರ್ಣಗೊಳಿಸಿರುವ ಯುವ ವಿದ್ವಾಂಸ ಮಹೇಶ ರೇಖೆ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ‘ಎಕ್ಸ್’ ಪೋಸ್ಟ್ ಮೂಲಕ ಮಂಗಳವಾರ ಶ್ಲಾಘಿಸಿದ್ದಾರೆ.
ಹತ್ತೊಂಬತ್ತು ವರ್ಷ ವಯಸ್ಸಿನ ವೇದಮೂರ್ತಿ ದೇವವ್ರತ ಮಹೇಶ ರೇಖೆ ಅವರು ಕಾಶಿಯಲ್ಲಿ ಪಠಿಸಿ, ಪೂರ್ಣಗೊಳಿಸಿರುವ ದಂಡಕ್ರಮ ಪ್ರಾಣಾಯಾಮವು ಜಟಿಲವಾಗಿದ್ದು, ಅದನ್ನು ವೇದಪಾರಾಯಣದ ಕಿರೀಟ ಎಂದೇ ಪರಿಗಣಿಸಲಾಗಿದೆ.
ಸುಮಾರು 200 ವರ್ಷಗಳ ನಂತರ ದಂಡಕ್ರಮವನ್ನು ಅದರ ಶುದ್ಧ ಶಾಸ್ತ್ರೀಯ ರೂಪದಲ್ಲಿಯೇ ಪಾರಾಯಣ ಮಾಡಲಾಗಿದೆ. ಈ ಹಿಂದೆ ಕೇವಲ ಎರಡು ಬಾರಿ ಈ ಸಾಧನೆ ನಡೆದಿದ್ದು, ಮಹಾರಾಷ್ಟ್ರ ಮೂಲದ ಯುವ ವಿದ್ವಾಂಸ ರೇಖೆ ಅವರು ಮೂರನೆಯವರಾಗಿದ್ದಾರೆ. ಹಾಗಾಗಿ ಈ ಸಾಧನೆ ಅಪರೂಪದ್ದು ಎಂದು ಅವರ ಸಾಧನೆಗೆ ಬೆಂಬಲ ನೀಡಿದ್ದ ಶೃಂಗೇರಿ ಮಠವು ತನ್ನ ‘ಎಕ್ಸ್’ ಖಾತೆಯ ಪೋಸ್ಟ್ನಲ್ಲಿ ಹೇಳಿದೆ.
19 ವರ್ಷದ ವೇದಮೂರ್ತಿಯವರ ಈ ಸಾಧನೆಯನ್ನು ಮುಂಬರುವ ತಲೆಮಾರುಗಳು ಸ್ಮರಿಸುತ್ತವೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
ಶ್ರೀ ವಲ್ಲಭರಾಮ ಸಾಲಿಗ್ರಾಮ ಸಂಗ್ವೇದ ವಿದ್ಯಾಲಯದಲ್ಲಿ ಅಕ್ಟೋಬರ್ 2ರಿಂದ ನವೆಂಬರ್ 30ರ ನಡುವೆ ಆಯೋಜಿಸಲಾಗಿದ್ದ ಪ್ರಾಣಾಯಾಮಕ್ಕೆ ಕಾಶಿಯ ಅನೇಕ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳು ಬೆಂಬಲ ನೀಡಿವೆ ಎಂದು ಶೃಂಗೇರಿ ಮಠ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.