ADVERTISEMENT

ಬಿಜೆಪಿ ಗೆದ್ದ ಪ್ರದೇಶಗಳಲ್ಲಿ ಹಿಂಸಾಚಾರ ನಡೆಯುತ್ತಿದೆ: ಮಮತಾ ಬ್ಯಾನರ್ಜಿ

ಪಿಟಿಐ
Published 5 ಮೇ 2021, 14:49 IST
Last Updated 5 ಮೇ 2021, 14:49 IST
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ   

ಕೋಲ್ಕತ್ತ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ಪ್ರದೇಶಗಳಲ್ಲಿ ಹಿಂಸಾಚಾರ ಹಾಗೂ ಘರ್ಷಣೆಗಳುನಡೆಯುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಆರೋಪಿಸಿದ್ದಾರೆ.

ಮೂರನೇ ಬಾರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚಣ ಸ್ವೀಕರಿಸಿದ ಮಮತಾ, ಹಿಂಸಾಚಾರದ ಹಳೆಯ ಹಾಗೂ ನಕಲಿ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಬಿಜೆಪಿ ಚುನಾವಣೆಯಲ್ಲಿ ಗೆದ್ದ ಪ್ರದೇಶಗಳಲ್ಲಿ ಹಿಂಸಾಚಾರ ಮತ್ತು ಘರ್ಷಣೆಗಳನ್ನು ನಡೆಯುತ್ತಿರುವುದನ್ನು ನಾನು ಗಮನಿಸಿದ್ದೇನೆ. ಈ ಎಲ್ಲ ಹಿಂಸಾಚಾರ ಘಟನೆಗಳು ನಡೆದಾಗ ಕಾನೂನು ಸುವ್ಯವಸ್ಥೆಯು ಚುನಾವಣಾ ಆಯೋಗದ ಅಧೀನತೆಯಲ್ಲಿತ್ತು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ADVERTISEMENT

ಕಳೆದ ಮೂರು ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಹದೆಗಟ್ಟಿದೆ. ಅಲ್ಲಲ್ಲಿ ಕೆಲವು ಘಟನೆಗಳು ನಡೆದಿವೆ. ಆದರೆ ಎಲ್ಲವೂ ನಿಜವಲ್ಲ. ಹೆಚ್ಚಿನವು ನಕಲಿಯಾಗಿದ್ದು, ಬಿಜೆಪಿಯು ಹಳೆಯ ವಿಡಿಯೊಗಳನ್ನು ಹಂಚುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನು ನಿಲ್ಲಿಸುವಂತೆ ನಾನು ಎಲ್ಲ ರಾಜಕೀಯ ಪಕ್ಷಗಳಿಗೆ ಮನವಿ ಮಾಡುತ್ತೇನೆ. ನೀವು ಚುನಾವಣೆಯಿಂದಲೂ ಜನರನ್ನು ಹಿಂಸಿಸುತ್ತಿದ್ದೀರಿ. ಇದನ್ನು ನಿಲ್ಲಿಸಿ, ಇಲ್ಲವಾದ್ದಲ್ಲಿ ಕಾನೂನು ತನ್ನ ಹಾದಿಯನ್ನು ಹಿಡಿಯಲಿದೆ. ಬಂಗಾಳವು ಶಾಂತಿ ಪರಂಪರೆಯ ನಾಡಾಗಿದ್ದು, ಇಲ್ಲಿ ಪ್ರತಿಯೊಂದು ವರ್ಗದ ಜನರೊಂದಿಗೆ ನಾವು ಶಾಂತಿಯಿಂದ ಇರುತ್ತೇವೆ ಎಂದಿದ್ದಾರೆ.

ಹಿಂಸಾಚಾರದಲ್ಲಿ ಯಾರೇ ಭಾಗಿಯಾಗುವುದನ್ನು ಕಂಡುಬಂದರೆ, ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಯಾವುದೇ ಕಾನೂನು ಬಾಹಿರ ಕೃತ್ಯವನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.