ADVERTISEMENT

ಹಿಂಸಾಚಾರದಲ್ಲಿ ಕೈವಾಡವಿಲ್ಲ; ಪ್ರತಿಭಟನೆ ಮುಂದುವರಿಯಲಿದೆ: ಕಿಸಾನ್ ಒಕ್ಕೂಟ

ಏಜೆನ್ಸೀಸ್
Published 27 ಜನವರಿ 2021, 6:52 IST
Last Updated 27 ಜನವರಿ 2021, 6:52 IST
ಗಣರಾಜ್ಯೋತ್ಸದ ದಿನದಂದು ರೈತರ ಪ್ರತಿಭಟನೆಯಲ್ಲಿ ಭಾರಿ ಹಿಂಸಾಚಾರ
ಗಣರಾಜ್ಯೋತ್ಸದ ದಿನದಂದು ರೈತರ ಪ್ರತಿಭಟನೆಯಲ್ಲಿ ಭಾರಿ ಹಿಂಸಾಚಾರ   

ನವದೆಹಲಿ: ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಗಣರಾಜ್ಯೋತ್ಸವದ ದಿನದಂದು ರೈತರು ನಡೆಸಿದ ಟ್ರ್ಯಾಕ್ಟರ್ ಜಾಥಾ ಪ್ರತಿಭಟನೆಯಲ್ಲಿ ನಡೆದ ಹಿಂಸಾಚಾರದಲ್ಲಿ ತಮ್ಮ ಕೈವಾಡವಿಲ್ಲ ಎಂದು ಭಾರತೀಯ ಕಿಸಾನ್ ಒಕ್ಕೂಟದ ವಕ್ತಾರ ರಾಕೇಶ್ ಟಿಖಾಯತ್ ಬುಧವಾರ ತಿಳಿಸಿದ್ದಾರೆ.

ಅಲ್ಲದೆ ಹಿಂಸಾಚಾರದಲ್ಲಿ ಭಾಗಿಯಾದವರು ಮತ್ತು ಕೆಂಪುಕೋಟೆಯಲ್ಲಿ ಧ್ವಜವನ್ನು ಹಾರಿಸಿದವರು ತಕ್ಕ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಕೆಂಪು ಕೋಟೆಯಲ್ಲಿ ಹಿಂಸಾಚಾರ ನಡೆಸಿದವರು ಮತ್ತು ಧ್ವಜ ಹಾರಿಸಿದವರು ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಕಳೆದ ಎರಡು ತಿಂಗಳಿನಿಂದ ನಿರ್ದಿಷ್ಟ ಧರ್ಮದ ವಿರುದ್ಧ ಪಿತೂರಿ ನಡೆಯುತ್ತಿದೆ. ಇದು ಸಿಖ್ಖರ ಚಳುವಳಿಯಲ್ಲ. ಇದು ರೈತರ ಹೋರಾಟ. ನಮ್ಮ ಸಮಸ್ಯೆಗಳು ಒಂದೇ ಆಗಿದ್ದು, ಪ್ರತಿಭಟನೆಯು ಮುಂದುವರಿಯಲಿದೆ ಎಂದು ತಿಳಿಸಿದರು.

ADVERTISEMENT

ದೀಪ್ ಸಿಧು ಬಿಜೆಪಿ ಕಾರ್ಯಕರ್ತ?
ಪಂಜಾಬಿ ನಟ, ಗಾಯಕ ಹಾಗೂ ಕಾರ್ಯಕರ್ತ ದೀಪ್ ಸಿಧು ಯುವಕರನ್ನು ಕೆಂಪು ಕೋಟೆಯತ್ತ ಸಾಗುವಂತೆ ನಿರ್ದೇಶಿಸಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರಾಕೇಶ್, ದೀಪ್ ಸಿಧು ಸಿಖ್ ಅಲ್ಲ. ಅವರು ಬಿಜೆಪಿಯ ಕಾರ್ಯಕರ್ತ. ಪ್ರಧಾನಿ ಅವರೊಂದಿಗೂ ಅವರ ಚಿತ್ರವಿದೆ. ಇದು ರೈತರ ಆಂದೋಲನವಾಗಿದ್ದು, ಹಾಗೆಯೇ ಮುಂದುವರಿಯಲಿದೆ. ತಕ್ಷಣವೇ ಕೆಲವು ಜನರು ಇಲ್ಲಿಂದ ಹೋಗಬೇಕು. ಬ್ಯಾರಿಕೇಡ್‌ಗಳನ್ನು ಮುರಿದವರು ಚಳುವಳಿಯ ಭಾಗವಲ್ಲ ಎಂದು ಸ್ಪಷ್ಟನೆ ನೀಡಿದರು.

ವೈರಲ್ ವಿಡಿಯೊ ಬಗ್ಗೆ ಪ್ರತಿಕ್ರಿಯೆ...
ವೈರಲ್ ವಿಡಿಯೊವೊಂದರಲ್ಲಿ ರಾಕೇಶ್ ಟಿಖಾಯತ್, ತಮ್ಮ ಬೆಂಬಲಿಗರಿಗೆ ಲಾಠಿಗಳೊಂದಿಗೆ ಶಸ್ತ್ರಸಜ್ಜಿತವಾಗಿರುವಂತೆ ಮನವಿ ಮಾಡುತ್ತಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಿಮ್ಮ ಸ್ವಂತ ಕೋಲುಗಳನ್ನು ತರಲು ಹೇಳಿದ್ದೇನೆ. ದಯವಿಟ್ಟು ಕೋಲು ಇಲ್ಲದ ಧ್ವಜವನ್ನು ತೋರಿಸಿ, ಹಾಗಿದ್ದರೆ ನನ್ನ ತಪ್ಪನ್ನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದರು.

ರಾಷ್ಟ್ರ ರಾಜಧಾನಿಯಲ್ಲಿ ಟ್ರ್ಯಾಕ್ಟರ್ ಪೆರೇಡ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ 22 ಎಫ್‌ಐಆರ್ ದಾಖಲಿಸಲಾಗಿದೆ. ಅಲ್ಲದೆ ಘಟನೆಯಲ್ಲಿ 300ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹಿಂಸಾಚಾರದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗುಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.