ADVERTISEMENT

ಎರಡನೇ ಹಂತದ SIR ಪ್ರಕ್ರಿಯೆ: 99ರಷ್ಟು ಮತದಾರರಿಗೆ ಗಣತಿ ನಮೂನೆ ಹಂಚಿಕೆ–EC

ಪಿಟಿಐ
Published 24 ನವೆಂಬರ್ 2025, 11:28 IST
Last Updated 24 ನವೆಂಬರ್ 2025, 11:28 IST
<div class="paragraphs"><p>ಚುನಾವಣಾ ಆಯೋಗ</p></div>

ಚುನಾವಣಾ ಆಯೋಗ

   

ಪಿಟಿಐ ಚಿತ್ರ

ನವದೆಹಲಿ: ಒಂಬತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಭಾಗವಾಗಿ ಶೇ 99ಕ್ಕೂ ಹೆಚ್ಚು ಮತದಾರರಿಗೆ ಗಣತಿ ಅರ್ಜಿ ನಮೂನೆಗಳನ್ನು ವಿತರಿಸಲಾಗಿದೆ ಎಂದು ಚುನಾವಣಾ ಆಯೋಗ ಸೋಮವಾರ ತಿಳಿಸಿದೆ.

ADVERTISEMENT

ಎರಡನೇ ಹಂತದ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಈವರೆಗೆ 50.50 ಕೋಟಿ ಅರ್ಜಿ ನಮೂನೆಗಳನ್ನು ವಿತರಿಸಲಾಗಿದೆ. ಅಂದರೆ, ಒಂಬತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಒಟ್ಟು 50.97 ಕೋಟಿ ಮತದಾರರಲ್ಲಿ ಇದುವರೆಗೆ ಶೇ 99.07ರಷ್ಟು ಮಂದಿಗೆ ಅರ್ಜಿ ನಮೂನೆ ವಿತರಿಸಿದಂತೆ ಆಗಿದೆ ಎಂದು ಹೇಳಿದೆ.

ಮೊದಲ ಹಂತದ ಎಸ್‌ಐಆರ್‌ ಪ್ರಕ್ರಿಯೆಯನ್ನು ಬಿಹಾರದಲ್ಲಿ ನಡೆಸಲಾಗಿದೆ. ಚುನಾವಣಾ ಆಯೋಗವು ಎರಡನೇ ಹಂತದಲ್ಲಿ ಛತ್ತೀಸಗಢ, ಗೋವಾ, ಗುಜರಾತ್, ಕೇರಳ, ಮಧ್ಯ ಪ್ರದೇಶ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಪುದುಚೇರಿ, ಅಂಡಮಾನ್‌ ಮತ್ತು ನಿಕೋಬಾರ್‌ ಹಾಗೂ ಲಕ್ಷದ್ವೀಪದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ನಡೆಸುತ್ತಿದೆ. ಇಲ್ಲಿ ಗಣತಿ ಪ್ರಕ್ರಿಯೆ ನ.4ರಂದು ಆರಂಭವಾಗಿದ್ದು, ಡಿ.4ರವರೆಗೆ ಮುಂದುವರಿಯಲಿದೆ.

ಎಸ್‌ಐಆರ್‌ ಕೈಗೊಂಡಿರುವ ತಮಿಳುನಾಡು, ಪುದುಚೇರಿ, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ.

ಕ್ಯಾಂಪ್‌ ಕಚೇರಿಗೆ ಬೆಂಕಿ: ಟಿಎಂಸಿ ಆರೋಪ (ಕೋಲ್ಕತ್ತ ವರದಿ): ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ಕಲ್ಯಾಣಿ ಪಟ್ಟಣದಲ್ಲಿ ಪಕ್ಷವು ನಿರ್ಮಿಸಿದ್ದ ಎಸ್‌ಐಆರ್‌ ಕ್ಯಾಂಪ್‌ ಕಚೇರಿಗೆ ಬಿಜೆಪಿ ಬೆಂಕಿ ಹಚ್ಚಿದೆ ಎಂದು ತೃಣಮೂಲ ಕಾಂಗ್ರೆಸ್ ಸೋಮವಾರ ಆರೋಪಿಸಿದೆ.

‘ಕಲ್ಯಾಣಿ ಪಟ್ಟಣದ ವಾರ್ಡ್ ಸಂಖ್ಯೆ 6ರಲ್ಲಿರುವ ಕಚೇರಿಯನ್ನು ಧ್ವಂಸಗೊಳಿಸಿ, ಸುಟ್ಟುಹಾಕಲಾಗಿದೆ. ಇದು ಬಿಜೆಪಿಯವರ ಕೆಲಸ’ ಎಂದು ಟಿಎಂಸಿ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದೆ. ಧ್ವಂಸಗೊಂಡ ಕಚೇರಿಯ ವಿಡಿಯೊವನ್ನು ಹಂಚಿಕೊಂಡಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.