ADVERTISEMENT

ಸಿಆರ್‌ಪಿಎಫ್‌ ಸಿಬ್ಬಂದಿ ಕಡ್ಡಾಯ ನಿವೃತ್ತಿ ಎತ್ತಿಹಿಡಿದ ಸುಪ್ರೀಂ ಕೋರ್ಟ್

ಪಿಟಿಐ
Published 9 ಮೇ 2024, 16:25 IST
Last Updated 9 ಮೇ 2024, 16:25 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ಸಹೋದ್ಯೋಗಿ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ ಸಿಬ್ಬಂದಿಗೆ ಕಡ್ಡಾಯ ನಿವೃತ್ತಿ ನೀಡಿರುವ ಕ್ರಮವನ್ನು ಸುಪ್ರೀಂ ಕೋರ್ಟ್‌ ಬುಧವಾರ ಎತ್ತಿಹಿಡಿದಿದೆ.

‘ಕಡ್ಡಾಯ ನಿವೃತ್ತಿಯು ಉದ್ಯೋಗಿಯನ್ನು ಕೆಲಸದಿಂದ ತೆಗೆಯುವ ಮತ್ತೊಂದು ವಿಧಾನವಾಗಿದೆ. ನಿವೃತ್ತಿ ನಂತರ ಸಿಗುವ ಸೌಲಭ್ಯಗಳಿಗೆ ತೊಂದರೆಯಾಗದಂತೆ ಅಯೋಗ್ಯ ಸಿಬ್ಬಂದಿಯನ್ನು ನೌಕರಿಯಿಂದ ತೆಗೆಯಲು ವ್ಯಾಪಕವಾಗಿ ಬಳಕೆಯಲ್ಲಿರುವ ವಿಧಾನವೂ ಇದಾಗಿದೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠ ಈ ಕುರಿತ ಅರ್ಜಿ ವಿಚಾರಣೆ ನಡೆಸಿತು.

ADVERTISEMENT

‘ಸಾಮಾನ್ಯವಾಗಿ ಕಡ್ಡಾಯ ನಿವೃತ್ತಿಯನ್ನು ಶಿಕ್ಷೆ ಎಂಬುದಾಗಿ ಪರಿಗಣಿಸಲಾಗುವುದಿಲ್ಲ. ಆದರೆ, ತನಿಖೆ ಒಳಪಡಿಸಿದ ನಂತರ ಶಿಕ್ಷೆ ರೂಪದಲ್ಲಿ ಈ ಕ್ರಮ ಕೈಗೊಳ್ಳಲು ಸೇವಾ ನಿಯಮಗಳಲ್ಲಿ ಅವಕಾಶ ಇದ್ದಲ್ಲಿ, ಹಾಗೆ ಮಾಡಬೇಕಾಗುತ್ತದೆ’ ಎಂದೂ ಪೀಠ ಹೇಳಿದೆ.

ಸಿಆರ್‌ಪಿಎಫ್‌ನಲ್ಲಿ ಹೆಡ್‌ಕಾನ್ಸ್‌ಸ್ಟೆಬಲ್‌ ಆಗಿದ್ದ ಸಂತೋಷಕುಮಾರ್‌ ತಿವಾರಿ ಎಂಬುವವರು 2005ರಲ್ಲಿ ತನ್ನ ಸಹೋದ್ಯೋಗಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಇದಕ್ಕಾಗಿ, ಸಿಆರ್‌ಪಿಎಫ್‌ ಕಾಯ್ದೆಯ ನಿಯಮ 27ರಡಿ ತಿವಾರಿ ಅವರಿಗೆ ಕಡ್ಡಾಯ ನಿವೃತ್ತಿ ನೀಡಲಾಗಿತ್ತು. ಇದನ್ನು ಎತ್ತಿ ಹಿಡಿದು ಒಡಿಶಾ ಹೈಕೋರ್ಟ್‌ ತೀರ್ಪು ನೀಡಿತ್ತು. ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ತಿವಾರಿ ಮೇಲ್ಮನವಿ ಸಲ್ಲಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.