ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ರಾಜ್ಯಪಾಲ ಸಿ.ವಿ ಆನಂದ ಬೋಸ್
ಪಿಟಿಐ ಚಿತ್ರ
ಕೋಲ್ಕತ್ತ: ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಜಭವನದಲ್ಲಿ ನಡೆದ ಸಮಾರಂಭಕ್ಕೆ ಕೋಲ್ಕತ್ತ ಪೊಲೀಸ್ ಬ್ಯಾಂಡ್ಗೆ ಪ್ರವೇಶ ನಿರಾಕರಿಸಿದ್ದರ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.
ಸಾಂಪ್ರದಾಯಿಕ ಚಹಾ ಕೂಟದ ಸಲುವಾಗಿ ಭಾನುವಾರ ಸಂಜೆ 4.29ಕ್ಕೆ ರಾಜಭವನಕ್ಕೆ ಬಂದ ಮಮತಾ ಅವರಿಗೆ, ಪೊಲೀಸ್ ಬ್ಯಾಂಡ್ ಹೊರಗೆ ಕಾಯುತ್ತಿರುವ ಬಗ್ಗೆ ತಿಳಿಸಲಾಯಿತು.
ಇದರಿಂದ ಬೇಸರಗೊಂಡ ಬ್ಯಾನರ್ಜಿ, ಸಮಾರಂಭದಲ್ಲಿ ಪೊಲೀಸ್ ಬ್ಯಾಂಡ್ ಪಾಲ್ಗೊಳ್ಳುವುದು ವಾಡಿಕೆ. ಪ್ರವೇಶ ನೀರಾಕರಿಸಿರುವುದು ಏಕೆ? ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬ್ಯಾಂಡ್ ಒಳಗೆ ಬರಲು ಕೂಡಲೇ ಅನುಮತಿಸಬೇಕು ಇಲ್ಲದಿದ್ದರೆ, ತಾವು ರಾಜಭವನ ಪ್ರವೇಶಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಬ್ಯಾಂಡ್ ಇದ್ದ ಗೇಟ್ ಬಳಿಗೆ ತೆರಳಿದ ಮಮತಾ, 'ಕೋಲ್ಕತ್ತ ಪೊಲೀಸರು ಭದ್ರತೆ ನೀಡುತ್ತಾರೆ; ಆದರೆ, ಬ್ಯಾಂಡ್ಗೆ ಪ್ರವೇಶ ಏಕಿಲ್ಲ' ಎಂದು ಕೇಳಿದರು.
ಇಷ್ಟೆಲ್ಲಾ ಆದ ಮೇಲೆ, ಪೊಲೀಸ್ ಬ್ಯಾಂಡ್ಗೆ ಪ್ರವೇಶಾವಕಾಶ ನೀಡಲಾಯಿತು.
ಈ ಬೆಳವಣಿಗೆಯ ಪ್ರತಿಭಟನಾರ್ಥವಾಗಿ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಅವರು ರಾಜಭವನಕ್ಕೆ ಪತ್ರ ಬರೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ರಾಜಭವನದ ಅಧಿಕಾರಿಯೊಬ್ಬರು, ವಾದ್ಯ ವೃಂದವು ಪ್ರತಿ ಸಲ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಸ್ಥಳದ ಬದಲು ಈ ಬಾರಿ ಬೇರೆಡೆ ವ್ಯವಸ್ಥೆ ಮಾಡಲಾಗಿತ್ತು. ಇದು ನನ್ನ ಗಮನಕ್ಕೆ ಬಂದಾಗ, ಕೂಡಲೇ ಮಧ್ಯ ಪ್ರವೇಶಿಸಿ ಸೂಕ್ತ ಸ್ಥಳ ನಿಗದಿ ಮಾಡಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.