ಕೋಲ್ಕತ್ತ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸರ್ಕಾರ ಗುರುವಾರ ರಾಜ್ಯ ವಿಧಾನಸಭೆಯಲ್ಲಿ ವಿವಾದಿತ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ನಿರ್ಣಯವನ್ನು ಮಂಡಿಸಿದೆ.
ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಪಾರ್ಥಾ ಚಟರ್ಜಿ ನಿರ್ಣಯವನ್ನು ಮಂಡಿಸಿದರು. ಅಲ್ಲದೆ ಮೂರು ನೂತನ ಕೃಷಿ ಕಾನೂನಗುಳು ರೈತ ವಿರೋಧಿಯಾಗಿದ್ದು ಕಾರ್ಪೋರೇಟ್ ಸಂಸ್ಥೆಗಳಿಗೆ ಅನುಕೂಲವಾಗಲಿದೆ ಎಂದುಆರೋಪಿಸಿದರು.
ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ ಕೂಡಲೇ ಸದನದ ಬಾವಿಗಿಳಿದ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿದರು. ಬಳಿಕ ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಸದನವನ್ನು ತ್ಯಜಿಸಿದರು.
ರೈತರೊಂದಿಗೆ ನಾವೀದ್ದೇವೆ: ಮಮತಾ
ಈ ಕುರಿತು ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರೈತರೊಂದಿಗೆ ನಾವಿದ್ದೇವೆ. ಅಲ್ಲದೆ ವಿವಾದಿತ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಬಯಸುತ್ತೇವೆ. ಬಲವಂತವಾಗಿ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ಹಿಂಸಾಚಾರಸಂಬಂಧ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು. ಇವೆಲ್ಲದಕ್ಕೂ ಬಿಜೆಪಿ ಮೂಲ ಕಾರಣವಾಗಿದ್ದು, ಮೊದಲು ದೆಹಲಿಯನ್ನು ನಿಭಾಯಿಸಿ ಆ ಬಳಿಕ ಬಂಗಾಳ ಕುರಿತು ಯೋಚಿಸಿ ಎಂದು ಹೇಳಿದರು.
ದೆಹಲಿಯ ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಎಲ್ಲಾದರೂ ಆ ಪರಿಸ್ಥಿತಿ ಬಂಗಾಳದಲ್ಲಿ ನಿರ್ಮಾಣವಾಗಿದ್ದರೆ ಅಮಿತ್ ಶಾ, ಏನಾಯಿತು ? ಎಂದು ಬಲವಾಗಿ ಖಂಡಿಸುತ್ತಿದ್ದರು. ಈ ಮೂರು ಕಾನೂನುಗಳನ್ನು ರದ್ದುಗೊಳಿಸುವಂತೆ ನಾವು ಬಯಸುತ್ತಿದ್ದೇವೆ. ಕಾನೂನುಗಳನ್ನು ರದ್ದುಗೊಳಿಸಿ ಅಥವಾ ಕುರ್ಚಿ ಬಿಟ್ಟು ತೆರಳಿ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.