ನವದೆಹಲಿ: ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಪ್ರಧಾನಿಯವರ ಘನತೆಯನ್ನು ಗೌರವಿಸುತ್ತಾರೆ ಹಾಗೆಯೇ ರೈತರ ಸ್ವಾಭಿಮಾನ ರಕ್ಷಿಸಲು ಬದ್ಧರಾಗಿದ್ದಾರೆ ಎಂದು ರೈತ ನಾಯಕ ನರೇಶ್ ಟಿಕಾಯತ್ ಹೇಳಿದ್ದಾರೆ.
ಗಾಜಿಪುರ ಗಡಿಯಲ್ಲಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು 'ಒಂದು ಗೌರವಯುತ ಪರಿಹಾರ ಸಿಗಬೇಕು. ಅಲ್ಲಿವರೆಗೂ ನಾವು ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ‘ ಎಂದು ಹೇಳುವ ಮೂಲಕ ಎಂಥ ಪರಿಸ್ಥಿತಿಯಲ್ಲೂ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂಬುದನ್ನು ನರೇಶ್ ಸ್ಪಷ್ಟಪಡಿಸಿದ್ದಾರೆ.
ದೆಹಲಿಯ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪ್ರತಿಭಟನಕಾರರ ವಿರುದ್ಧ 40 ಪ್ರಕರಣಗಳನ್ನು ದಾಖಲಿಸಿದ್ದು, 80 ಮಂದಿಯನ್ನು ಬಂಧಿಸಿರುವ ಕುರಿತು ಪ್ರಸ್ತಾಪಿಸಿದ ನರೇಶ್, ‘ಸರ್ಕಾರ ಮೊದಲು ನಮ್ಮ ರೈತರನ್ನು ಬಿಡುಗಡೆಗೊಳಿಸಿ, ಮಾತುಕತೆ ಪೂರಕ ವಾತಾವರಣವನ್ನು ಸಿದ್ಧಗೊಳಿಸಬೇಕು‘ ಎಂದು ಅವರು ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಕೃಷಿ ಕಾಯ್ದೆಗಳ ವಿಚಾರದಲ್ಲಿ ಸರ್ಕಾರ ಈಗಲೂ ರೈತರೊಂದಿಗೆ ಮಾತುಕತೆಗೆ ಸಿದ್ಧವಿದೆ. ಕೇವಲ ಒಂದು ದೂರವಾಣಿ ಕರೆಯ ದೂರದಲ್ಲಿದೆ. ಪ್ರತಿಭಟನಕಾರರು ಒಂದು ಕರೆ ಮಾಡಿದರೆ ಸಾಕು ನಮ್ಮ ಸರ್ಕಾರ ರೈತರೊಂದಿಗೆ ಚರ್ಚಿಸಲಿದೆ‘ ಎಂದು ಹೇಳಿದ್ದರು.
‘ನಾವು ಪ್ರಧಾನಿಯವರ ಘಟನತೆಯನ್ನು ಗೌರವಿಸುತ್ತೇವೆ. ಸರ್ಕಾರ ಅಥವಾ ಸಂಸತ್ತು ಎಂದೂ ರೈತರ ಎದುರು ತಲೆಬಾಗಬೇಕೆಂದು ನಾವು ಬಯಸುವುದಿಲ್ಲ‘ ಎಂದು ಹೇಳಿದ ನರೇಶ್, ‘ರೈತರ ಸ್ವಾಭಿಮಾನವನ್ನು ರಕ್ಷಿಸುತ್ತೇವೆ. ಸಮಸ್ಯೆಯ ಪರಿಹಾರಕ್ಕಾಗಿ ದಾರಿಯನ್ನು ಹುಡುಕಬೇಕು. ಮಾತುಕತೆ ನಡೆಸಬೇಕು‘ ಎಂದು ಸರ್ಕಾರವನ್ನು ಒತ್ತಾಯಿಸಿದರು.
‘ಜನವರಿ 26ರಂದು ನಡೆದ ಹಿಂಸಾಚಾರ ಪಿತೂರಿಯ ಭಾಗವಾಗಿತ್ತು. ತ್ರಿವರ್ಣ ಧ್ವಜವು ಎಲ್ಲ ಧ್ವಜಗಳಿಗಿಂತ ಮೇಲಿರುತ್ತದೆ. ಅದನ್ನು ಅಗೌರವಿಸಲು ಎಂದಿಗೂ ಬಿಡುವುದಿಲ್ಲ. ಅಂಥ ಕೆಲಸವನ್ನು ಸಹಿಸುವುದೂ ಇಲ್ಲ‘ ಎಂದು ಅವರು ಸ್ಪಷ್ಟಪಡಿಸಿದರು.
ನರೇಂದ್ರ ಮೋದಿಯವರು ಭಾನುವಾರದ ತಮ್ಮ ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ಜ.26 ರ ಘಟನೆಯನ್ನು ಉಲ್ಲೇಖಿಸಿ ‘ಗಣರಾಜ್ಯೋತ್ಸವದಂದು ದೆಹಲಿಯ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜಕ್ಕೆ ತೋರಿದ ಅಗೌರವದಿಂದ ದೇಶದ ಜನರಿಗೆ ತೀವ್ರ ನೋವಾಗಿದೆ‘ಎಂದು ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.