ADVERTISEMENT

ಕಿಸಾನ್ ಮೋರ್ಚಾ ಅನುಮತಿ ದೊರೆತರೆ ನ.26ರಂದ್‌ ಸಂಸತ್‌ಗೆ ಮೆರವಣಿಗೆ: ಬಿಕೆಯು ನಾಯಕ

ಪಿಟಿಐ
Published 8 ನವೆಂಬರ್ 2021, 2:53 IST
Last Updated 8 ನವೆಂಬರ್ 2021, 2:53 IST
ಗುರುನಾಮ್ ಸಿಂಗ್ ಚಡೂನಿ (ಚಿತ್ರ ಕೃಪೆ – Facebook/gurnamsinghcharunibku)
ಗುರುನಾಮ್ ಸಿಂಗ್ ಚಡೂನಿ (ಚಿತ್ರ ಕೃಪೆ – Facebook/gurnamsinghcharunibku)   

ಚಂಡೀಗಡ:‘ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ)’ ಅನುಮತಿ ನೀಡಿದರೆ ನ.26ರಂದು ಸಂಸತ್‌ ಭವನದತ್ತ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳುವುದಾಗಿ ‘ಭಾರತ್ ಕಿಸಾನ್ ಯೂನಿಯನ್‌ನ (ಬಿಕೆಯು)’ ಹರಿಯಾಣ ಘಟಕದ ಅಧ್ಯಕ್ಷ ಗುರುನಾಮ್ ಸಿಂಗ್ ಚಡೂನಿ ಹೇಳಿದ್ದಾರೆ.

ಹರಿಯಾಣದ ಅನೇಕ ರೈತ ಸಂಘಟನೆಗಳ ಜತೆ ರೋಹ್ಟಕ್‌ನಲ್ಲಿ ಭಾನುವಾರ ಸಭೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

‘ಸಂವಿಧಾನ ದಿನವೂ ಆಗಿರುವ ನ.26ರಂದು ಸಂಸತ್‌ಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಈ ಕುರಿತು ನ.9ರಂದು ಸಂಯುಕ್ತ ಕಿಸಾನ್ ಮೋರ್ಚಾಗೆ ಪ್ರಸ್ತಾವ ಸಲ್ಲಿಸಲಿದ್ದೇವೆ. ಅನುಮತಿ ದೊರೆತರೆ ಮುಂದುವರಿಯಲಿದ್ದೇವೆ’ ಎಂದು ಚಡೂನಿ ಹೇಳಿದ್ದಾರೆ.

ADVERTISEMENT

ಬಿಜೆಪಿ ಸಂಸದ ಅರವಿಂದ ಶರ್ಮಾ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆ ಖಂಡಿಸಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಲೂ ನಿರ್ಧರಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಪಕ್ಷದ ಕೆಲವು ನಾಯಕರನ್ನು ರೋಹ್ಟಕ್‌ನಲ್ಲಿ ಶುಕ್ರವಾರ ವಶಕ್ಕೆ ಪಡೆದದ್ದನ್ನು ವಿರೋಧಿಸಿ ಹೇಳಿಕೆ ನೀಡಿದ್ದ ಅರವಿಂದ ಶರ್ಮಾ, ಹರಿಯಾಣದ ಮಾಜಿ ಸಚಿವ ಮನೀಷ್ ಗ್ರೋವರ್ ತಂಟೆಗೆ ಯಾರಾದರೂ ಮುಂದಾದರೆ ಅಂಥವರ ಕಣ್ಣು ಕಿತ್ತು ಕೈ ಕತ್ತರಿಸಲಾಗುವುದು ಎಂದು ಹೇಳಿದ್ದಾರೆ ಎನ್ನಲಾಗಿದೆ.

ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹರಿಯಾಣದಲ್ಲಿ ಪ್ರತಿಭಟನೆ ನಡೆಸುತ್ತಿರುವ ಹಲವು ರೈತರಿಗೆ ಅನೇಕ ಪ್ರಕರಣಗಳಲ್ಲಿ ಸಮನ್ಸ್ ನೀಡಲಾಗುತ್ತಿದೆ. ಈ ಸಮನ್ಸ್‌ಗಳಿಗೆ ಯಾರೂ ಉತ್ತರಿಸಲು ಹೋಗಬಾರದು ಎಂದೂ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದೂ ಚಡೂನಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.