ADVERTISEMENT

ಶಬರಿಮಲೆ ಏರಿಬಂದ ಮಹಿಳೆಗೆ ಸಿಗಲಿಲ್ಲ ಗಂಡನ ಮನೆಗೆ ಪ್ರವೇಶ!

ಏಜೆನ್ಸೀಸ್
Published 22 ಜನವರಿ 2019, 17:42 IST
Last Updated 22 ಜನವರಿ 2019, 17:42 IST
   

ತಿರುವನಂತಪುರ:ಜನವರಿ 2ರಂದು ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನ ಮಾಡಿ ದೇಶವ್ಯಾಪಿ ಸುದ್ದಿಯಾಗಿದ್ದ ಕನಕದುರ್ಗ(39) ಅವರನ್ನು ಮನೆಯವರೇ ಮನೆಗೆ ಪ್ರವೇಶಿಸಲು ತಡೆದಿದ್ದಾರೆ. ಇತ್ತೀಚಿಗೆ ಅವರ ಅತ್ತೆಯಿಂದ ಹಲ್ಲೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

ದೇವಾಲಯ ಪ್ರವೇಶಿದ ನಂತರ ಬಿಂದು ಮತ್ತು ಕನಕದುರ್ಗ ಮಹಿಳೆಯರು ಸುಮಾರು ಎರಡು ವಾರಗಳ ವನವಾಸ ಅನುಭವಿಸಿದ್ದರು. ಜನವರಿ 15ರಂದು ಕನಕದುರ್ಗಾ ಮನೆಗೆ ವಾಪಾಸ್‌ ಆದಾಗ ಅವರ ಅತ್ತೆಯೇ ಹಲ್ಲೆ ನಡೆಸಿದ್ದರಿಂದ ಗಾಯಗೊಂಡು, ಚಿಕಿತ್ಸೆಗಾಗಿ ಕೋಯಿಕ್ಕೋಡ್‌ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಮನೆಗೆ ಪ್ರವೇಶಿಸುತ್ತಿದ್ಧಂತೆ ಆಕೆಯ ಮನೆಯವರು ಅವರನ್ನು ತಡೆದು ಬಾಗಿಲು ಮುಚ್ಚಿದ್ದಾರೆ.

ಮನೆಯಿಂದ ಹೊರ ಹಾಕಿದ ಬೆನ್ನಲೇ ಕನಕದುರ್ಗ ಜಿಲ್ಲಾ ದೌರ್ಜನ್ಯ ತಡೆ ಅಧಿಕಾರಿಗೆ ದೂರು ನೀಡಿದ್ದಾರೆ. ದೂರನ್ನು ಕೋರ್ಟ್‌ ಗಮನಕ್ಕೆ ತರಲಾಗಿದ್ದು, ಆದೇಶಕ್ಕಾಗಿ ಕಾಯುತ್ತಿರುವುದು ತಿಳಿದು ಬಂದಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ADVERTISEMENT

ಕನಕದುರ್ಗ ಅವರನ್ನು ಪೊಲೀಸರು ಆಸ್ಪತ್ರೆಯಿಂದ ಮನೆಗೆ ಕರೆದು ಹೋದಾಗ, ಆಕೆಯ ಪತಿ ಮನೆಯ ಬಾಗಿಲಿಗೆ ಬೀಗ ಜಡಿದು, ತಾಯಿ ಮತ್ತು ಇಬ್ಬರು ಮಕ್ಕಳೊಂದಿಗೆ ಸ್ಥಳದಿಂದ ಹೊರಟಿದ್ದಾರೆ. ಸದ್ಯ ಕನಕದುರ್ಗ ಪೊಲೀಸರ ರಕ್ಷಣೆಯಲ್ಲಿ ಸರ್ಕಾರಿ ವಾಸದಲ್ಲಿದ್ದಾರೆ.

ಜ.15ರಂದು ಕನಕದುರ್ಗ ಮನೆಗೆ ಬರುತ್ತಿದ್ದಂತೆ ಆಕೆಯ ಅತ್ತೆ, ಕೋಲಿನಿಂದ ಮನಬಂದಂತೆ ಬಡಿದಿದ್ದರು. ’ನಮ್ಮ ಮನೆಯ ಗೌರಕ್ಕೆ ಧಕ್ಕೆ ತಂದವಳು,..’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ವರದಿಯಾಗಿತ್ತು.ಹಾಗಾಗಿ ಕನಕದುರ್ಗಾ ಮತ್ತು ಬಿಂದು ‘ತಮಗೆ ಭದ್ರತೆಯ ಅಗತ್ಯವಿದೆ’ ಎಂದು ಕೋರಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಇಬ್ಬರಿಗೂ ದಿನದ 24 ಗಂಟೆಯೂ ರಕ್ಷಣೆ ಕೊಡಬೇಕು ಎಂದು ಸುಪ್ರೀಂಕೋರ್ಟ್‌ ಕೇರಳ ಪೊಲೀಸರಿಗೆ ಸೂಚಿಸಿತ್ತು.

ಮತ್ತಷ್ಟು ಓದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.