ADVERTISEMENT

ಕಡು ಬಡತನ ತಗ್ಗಿಸಿದ ಭಾರತ: ವಿಶ್ವ ಬ್ಯಾಂಕ್ ಅಧ್ಯಯನ ವರದಿ

ಅನ್ನಪೂರ್ಣ ಸಿಂಗ್
Published 17 ಏಪ್ರಿಲ್ 2022, 18:49 IST
Last Updated 17 ಏಪ್ರಿಲ್ 2022, 18:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 2011ರಿಂದ 2019ರ ನಡುವಿನ ಅವಧಿಯಲ್ಲಿ ಭಾರತದಲ್ಲಿ ಕಡು ಬಡತನವು ಶೇಕಡ 12ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಆಗಿದೆ ಎಂದು ವಿಶ್ವ ಬ್ಯಾಂಕ್‌ನ ಅಧ್ಯಯನವೊಂದು ಹೇಳಿದೆ.

ಈ ಅಧ್ಯಯನದ ಪ್ರಕಾರ 2019ರಲ್ಲಿ ಕಡು ಬಡತನವು ಶೇಕಡ 0.8ರ ಮಟ್ಟಕ್ಕೆ ಇಳಿಕೆಯಾಗಿತ್ತು. 2020ರಲ್ಲಿ ಕೋವಿಡ್‌ ಸಾಂಕ್ರಾಮಿಕದ ಅವಧಿಯಲ್ಲಿ ಸರ್ಕಾರದ ಕಡೆಯಿಂದ ಆಹಾರ ಧಾನ್ಯ ಪೂರೈಸುವ ಯೋಜನೆ ಚಾಲ್ತಿಯಲ್ಲಿ ಇದ್ದ ಕಾರಣ ಕಡು ಬಡತನದ ಪ್ರಮಾಣವು ಹೆಚ್ಚಾಗಲಿಲ್ಲ.

ಕಡು ಬಡತನವು ಗ್ರಾಮೀಣ ಭಾರತದಲ್ಲಿ ಗರಿಷ್ಠ ಪ್ರಮಾಣದ ಇಳಿಕೆ ಕಂಡಿದೆ. 2011ರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕಡು ಬಡತನವು ಶೇ 26.5ರಷ್ಟು ಇದ್ದುದು 2019ರಲ್ಲಿ ಶೇ 11.6ಕ್ಕೆ ಇಳಿಕೆಯಾಗಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.

ADVERTISEMENT

‘2011ರಿಂದ 2019ರ ನಡುವಿನ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಬಡತನವು ಶೇ 14.7ರಷ್ಟು ಹಾಗೂ ನಗರ ಪ್ರದೇಶಗಳಲ್ಲಿ ಬಡತನವು ಶೇ 7.9ರಷ್ಟು ಇಳಿಕೆ ಆಗಿದೆ’ ಎಂದು ಅದು ಹೇಳಿದೆ. ಅಧ್ಯಯನ ವರದಿಯನ್ನು ಅರ್ಥಶಾಸ್ತ್ರಜ್ಞರಾದ ಸುತೀರ್ಥ ಸಿನ್ಹಾ ರಾಯ್ ಮತ್ತು ರಾಯ್‌ ವಾನ್‌ ಡರ್ ವೈಯ್ಡ್ ಸಿದ್ಧಪಡಿಸಿದ್ದಾರೆ.

ಸಣ್ಣ ಹಿಡುವಳಿ ಇರುವ ರೈತರ ಆದಾಯದಲ್ಲಿ ಹೆಚ್ಚಿನ ಪ್ರಮಾಣದ ಏರಿಕೆ ಕಂಡುಬಂದಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ‘ಸಣ್ಣ ಹಿಡುವಳಿ ಇರುವ ರೈತರ ವಾಸ್ತವ ಆದಾಯವು 2013 ಹಾಗೂ 2019ರ ನಡುವೆ ವಾರ್ಷಿಕ ಶೇ 10ರಷ್ಟು ಹೆಚ್ಚಳ ಕಂಡಿದೆ. ಇದೇ ಅವಧಿಯಲ್ಲಿ ದೊಡ್ಡ ಹಿಡುವಳಿ ಹೊಂದಿರುವ ರೈತರ ಆದಾಯವು ಶೇ 2ರಷ್ಟು ವಾರ್ಷಿಕ ಹೆಚ್ಚಳ ಕಂಡಿದೆ’ ಎಂದು ಅಧ್ಯಯನವು ಹೇಳಿದೆ.

2011ರಿಂದ 2019ರ ನಡುವೆ ಬಡತನವು ತುಸು ಹೆಚ್ಚಾದ ಎರಡು ಸಂದರ್ಭಗಳು ಇವೆ. ನೋಟು ರದ್ದತಿ ತೀರ್ಮಾನ ಕೈಗೊಂಡ ಅವಧಿಯಲ್ಲಿ ಮತ್ತು ಅದಾದ ನಂತರ ಆರ್ಥಿಕ ಪ್ರಗತಿಯು ಮಂದಗತಿಗೆ ತಿರುಗಿದ ಸಂದರ್ಭದಲ್ಲಿ ಈ ರೀತಿ ಆಗಿತ್ತು ಎಂದು ವರದಿ ತಿಳಿಸಿದೆ.

ಜೀವನ ಸಾಗಿಸಲು ದಿನಕ್ಕೆ ₹ 145.03ಕ್ಕಿಂತ (1.9 ಅಮೆರಿಕನ್ ಡಾಲರ್) ಕಡಿಮೆ ಹಣ ಹೊಂದಿರುವವರನ್ನು ವಿಶ್ವ ಬ್ಯಾಂಕ್ ಕಡುಬಡವರು ಎಂದು ಪರಿಗಣಿಸಿದೆ.

ಕಡು ಬಡತನವನ್ನು ಭಾರತವು ಬಹುತೇಕ ಹೋಗಲಾಡಿಸಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಹೇಳಿದ ನಂತರದಲ್ಲಿ ವಿಶ್ವ ಬ್ಯಾಂಕ್‌ ಈ ಮಾತು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.