ADVERTISEMENT

World Environment Day | ಹವಾಮಾನ ನ್ಯಾಯದ ನಾಯಕ ಭಾರತ: ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 8:11 IST
Last Updated 5 ಜೂನ್ 2021, 8:11 IST
ಪ್ರಧಾನಿ ನರೇಂದ್ರ ಮೋದಿ (ಚಿತ್ರ ಕೃಪೆ– ಮೋದಿ ಅವರ ಟ್ವಿಟರ್‌ ಖಾತೆ)
ಪ್ರಧಾನಿ ನರೇಂದ್ರ ಮೋದಿ (ಚಿತ್ರ ಕೃಪೆ– ಮೋದಿ ಅವರ ಟ್ವಿಟರ್‌ ಖಾತೆ)   

ನವದೆಹಲಿ: ಜಗತ್ತು ಇಂದು ಭಾರತವನ್ನು ಹವಾಮಾನ ನ್ಯಾಯದ ನಾಯಕನಂತೆ ಕಾಣುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಾತನಾಡಿದ ಅವರು, ಹವಾಮಾನ ವಿಚಾರದಲ್ಲಿ ಭಾರತವು ಬಹಳ ದೂರ ಕ್ರಮಿಸಿದೆ. ಹವಾಮಾನ ವಿಚಾರದಲ್ಲಿ ಭಾರತವನ್ನು ಸವಾಲೆಂದು ಪರಿಗಣಿಸಿದ್ದ ವಿಶ್ವದ ಇತರ ರಾಷ್ಟ್ರಗಳು ಈಗ ದೇಶವನ್ನು ಹವಾಮಾನ ನ್ಯಾಯದ ನಾಯಕನಂತೆ ಕಾಣುತ್ತಿವೆ ಎಂದು ಹೇಳಿದ್ದಾರೆ.

ಎಥೆನಾಲ್‌ ಅನ್ನು ಜೈವಿಕ ಇಂಧನವಾಗಿ ಬಳಸುವ ಕಬ್ಬು ಬೆಳೆಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಅದರ ಬಳಕೆಯ ಪ್ರಯೋಜನಗಳ ಬಗ್ಗೆ ಹೆಚ್ಚು ಅರಿವು ಮೂಡಿಸುವಂತೆ ಸಲಹೆ ನೀಡಿದ್ದಾರೆ. ತೈಲ ಮಾರುಕಟ್ಟೆ ಕಂಪನಿಗಳು ಎಥೆನಾಲ್‌ಗೆ ₹21,000 ಕೋಟಿ ಹೂಡಿಕೆ ಮಾಡಿದ್ದು, ಅದರಲ್ಲಿ ಹೆಚ್ಚಿನವು ರೈತರಿಗೆ ಲಭ್ಯವಾಗುವಂತೆ ಮಾಡಿವೆ ಎಂದೂ ಹೇಳಿದ್ದಾರೆ.

ಜೈವಿಕ ಇಂಧನ ಬಳಕೆಯ ಉತ್ತೇಜನಕ್ಕಾಗಿ ಪುಣೆಯಲ್ಲಿ ಕೈಗೊಳ್ಳಲಾಗಿರುವ ‘ಇ–100’ ಪ್ರಾಯೋಗಿಕ ಯೋಜನೆಗೆ ಮೋದಿ ಚಾಲನೆ ನೀಡಿದ್ದಾರೆ. ‘ಉತ್ತಮ ಪರಿಸರಕ್ಕಾಗಿ ಜೈವಿಕ ಇಂಧನ ಬಳಕೆಗೆ ಉತ್ತೇಜನ’ ಎಂಬ ಧ್ಯೇಯದೊಂದಿಗೆ ಈ ಯೋಜನೆ ಹಮ್ಮಿಕೊಳ್ಳಲಾಗಿದೆ.

ವನ್ಯಜೀವಿ ಸಂರಕ್ಷಣೆಯಿಂದ ತೊಡಗಿ ಸೌರಶಕ್ತಿಯ ಬಳಕೆಯವರೆಗೆ ಇತರ ಕ್ಷೇತ್ರಗಳಲ್ಲಿನ ಪ್ರಗತಿಯನ್ನೂ ಮೋದಿ ಶ್ಲಾಘಿಸಿದ್ದಾರೆ. ದೇಶದ ಪರಿಸರವನ್ನು ಉತ್ತಮಗೊಳಿಸುವುದರ ಜತೆಗೆ ಆರ್ಥಿಕತೆ ಮುಂದಕ್ಕೊಯ್ಯುವುದು ಸರ್ಕಾರದ ಯೋಜನೆಯಾಗಿದೆ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.