ಜೈಪುರ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಾಮನ ಭಕ್ತರು ಬಿಜೆಪಿಗೆ, ರಾವಣನ ಭಕ್ತರು ಕಾಂಗ್ರೆಸ್ಗೆ ಮತ ನೀಡುತ್ತಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರಾಜಸ್ಥಾನದಮಲ್ಪುರದಲ್ಲಿ ನಡೆದ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,‘ರಾಮನ ಭಕ್ತ ಹನುಮಂತ ದಲಿತ ಬುಡಕಟ್ಟು ಜನಾಂಗದವನು. ಕಾಡಿನ ನಿವಾಸಿ. ಆತ ಪೂರ್ವದಿಂದ ಪಶ್ಚಿಮ, ಉತ್ತರದಿಂದ ದಕ್ಷಿಣದ ವರೆಗಿನ ಭಾರತದಲ್ಲಿರುವ ಎಲ್ಲಾ ಸಮುದಾಯಗಳ ಸಾಮರಸ್ಯಕ್ಕೆ ಶ್ರಮವಹಿಸಿದವನು. ಇದು ಕೇವಲ ಹನುಮಂತನ ಇಚ್ಛೆಯಾಗಿರಲಿಲ್ಲ. ರಾಮನ ಇಂಗಿತವೂ ಆಗಿತ್ತು. ಇವರಿಬ್ಬರ ಮಹಾತ್ವಾಕಾಂಕ್ಷೆಯನ್ನು ಈಡೇರಿಸುವವರೆಗೆ ವಿಶ್ರಾಂತಿಯ ಮಾತಿಲ್ಲ’ ಎಂದು ಹೇಳಿದ್ದಾರೆ.
ಇದರ ಜೊತೆಗೆ ರಾಮನನ್ನು ಪೂಜಿಸುವವರು ಬಿಜೆಪಿ ಪಕ್ಷಕ್ಕೆ ಮತ ಚಲಾಯಿಸುತ್ತಾರೆ. ಇನ್ನು ರಾವಣನ ಭಕ್ತರು ಕಾಂಗ್ರೆಸ್ಗೆ ನಿಷ್ಠೆ ತೋರುತ್ತಾರೆ ಎಂದು ಹೇಳಿರುವ ಆದಿತ್ಯನಾಥ್ ಅಲ್ವಾರ್ನಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದ್ದಾರೆ.
ಇದು ಮೊದಲೇನಲ್ಲ
ಈ ಹಿಂದೆಯೂ ಚತ್ತೀಸಗಢದ ಭಾಷಣದಲ್ಲಿಯೂ ಹನುಮಂತ ಒಬ್ಬ ಆದಿವಾಸಿ, ವನವಾಸಿ. ರಾಮ ವನವಾಸದಲ್ಲಿದ್ದ ವೇಳೆ ರಾಕ್ಷಸರ ಅಟ್ಟಹಾಸದಿಂದ ಸ್ಥಳೀಯ ಬುಡಕಟ್ಟು ಜನಾಂಗವನ್ನು ಬದುಕಿಸಿದ್ದರು. ರಾಮ ತ್ರೇತಾಯುಗದಲ್ಲಿ ಮಾಡಿದಂತೆ, ಬಿಜೆಪಿಯು ಈ ರಾಜ್ಯದಲ್ಲಿ ರಾಮ ರಾಜ್ಯ ನಿರ್ಮಿಸುವ ಗುರಿಯನ್ನಿಟ್ಟುಕೊಂಡಿದೆ ಎಂದು ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.