ಕಾಡಾನೆ
ವಯನಾಡ್: ಕೇರಳದ ವಯನಾಡ್ನಲ್ಲಿ ಬುಧವಾರ ಮುಂಜಾನೆ ಕಾಡಾನೆ ದಾಳಿಯಲ್ಲಿ 27 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷ ಜುಲೈನಲ್ಲಿ ಭೂಕುಸಿತ ಸಂಭವಿಸಿ ಹಲವಾರು ಜೀವಗಳು ಬಲಿಯಾದ ಚೂರಲ್ಮಲ ಬಳಿಯ ಅಟ್ಟಮಲದಲ್ಲಿರುವ ಬುಡಕಟ್ಟು ಜನರು ವಾಸವಿರುವ ಪ್ರದೇಶದಲ್ಲಿ ಘಟನೆ ನಡೆದಿದೆ.
ಬುಡಕಟ್ಟು ಸಮುದಾಯದ ಸದಸ್ಯ ಬಾಲಕೃಷ್ಣನ್ ಮೃತಪಟ್ಟ ವ್ಯಕ್ತಿ. ಬುಧವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ.
ಘಟನೆಯಿಂದ ಸ್ಥಳೀಯ ನಿವಾಸಿಗಳು ಆಕ್ರೋಶಿತರಾಗಿದ್ದು, ಕಾಡು ಪ್ರಾಣಿಗಳ ದಾಳಿಯಿಂದ ನಾಗರಿಕರನ್ನು ರಕ್ಷಿಸಲು ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.
ಮಾನವ–ಪ್ರಾಣಿ ಸಂಘರ್ಷ ತಡೆಯಲು ಕ್ರಮ ತೆಗೆದುಕೊಳ್ಳಬೇಕು, ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲು ಅನುಮತಿಸಲಿಲ್ಲ.
₹ 10 ಲಕ್ಷ ಪರಿಹಾರ, ಕುಟುಂಬಸ್ಥರಿಗೆ ಸರ್ಕಾರಿ ಕೆಲಸ ಮತ್ತು ಅಂತ್ಯಕ್ರಿಯೆಗೆ ಆರ್ಥಿಕ ನೆರವು ನೀಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಮೊದಲ ಹಂತವಾಗಿ, ಸಂತ್ರಸ್ತರ ಕುಟುಂಬಕ್ಕೆ ₹ 5 ಲಕ್ಷ ಅರಣ್ಯ ಇಲಾಖೆ ಬುಧವಾರವೇ ಹಸ್ತಾಂತರಿಸಲಿದೆ. ಅಂತ್ಯಕ್ರಿಯೆ ನಡೆಸಲು ಅಗತ್ಯವಿರುವ ಎಲ್ಲಾ ಸಹಾಯವನ್ನು ಬುಡಕಟ್ಟು ಇಲಾಖೆ ಒದಗಿಸಲಿದೆ ಎಂದು ವೈತಿರಿ ತಾಲ್ಲೂಕಿನ ತಹಶೀಲ್ದಾರ್ ತಿಳಿಸಿದ್ದಾರೆ.
ಉಳಿದ ₹ 5 ಲಕ್ಷ ಶೀಘ್ರದಲ್ಲೇ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.