ADVERTISEMENT

ಪ್ರಶ್ನೆಪತ್ರಿಕೆ ಸೋರಿಕೆಗೆ ಯುವಕರ ಆಕ್ರೋಶ; ದಾರಿ ತಪ್ಪಿಸುತ್ತಿರುವ PM– ರಾಹುಲ್

ಪಿಟಿಐ
Published 23 ಫೆಬ್ರುವರಿ 2024, 15:58 IST
Last Updated 23 ಫೆಬ್ರುವರಿ 2024, 15:58 IST
<div class="paragraphs"><p>ರಾಹುಲ್ ಗಾಂಧಿ, ನರೇಂದ್ರ ಮೋದಿ</p></div>

ರಾಹುಲ್ ಗಾಂಧಿ, ನರೇಂದ್ರ ಮೋದಿ

   

ನವದೆಹಲಿ: ‘ಪೊಲೀಸ್ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಯುವಕರು ಪ್ರತಿಭಟನೆ ನಡೆಸುತ್ತಿದ್ದರೆ, ಪ್ರಧಾನಿ ಅವರು ಯುವಕರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧಿಸಿದ ಯುವಕರ ಪ್ರತಿಭಟನೆಯ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ, ‘ಲಖನೌದಿಂದ ಪ್ರಯಾಗ್‌ರಾಜ್ ವರೆಗೂ ಉದ್ಯೋಗಾಕಾಂಕ್ಷಿಗಳು ಬೀದಿಗಿಳಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಸ್ಥಳದಿಂದ 100 ಕಿ.ಮೀ. ದೂರದಲ್ಲಿರು ವಾರಾಣಸಿಯಲ್ಲಿ ಅವರಿಗೆ ಬೇರೆಯದನ್ನೇ ಉಪನ್ಯಾಸ ಮಾಡುತ್ತಿದ್ದಾರೆ’ ಎಂದಿದ್ದಾರೆ.

ADVERTISEMENT

ವಾರಾಣಸಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಜಾತಿ ಆಧಾರದಲ್ಲಿ ಜನರನ್ನು ಪರಸ್ಪರ ಬಡಿದಾಡುವಂತೆ ವಿರೋಧ ಪಕ್ಷದವರು ಮಾತನಾಡುತ್ತಾರೆ’ ಎಂದಿದ್ದಾರೆ.

‘ಸ್ವತಃ ಪ್ರಜ್ಞೆಯಲ್ಲಿ ಇಲ್ಲದವರು ಯುವಜನರು ಮತ್ತಿನಲ್ಲಿ ಇದ್ದಾರೆ ಹಾಗೂ ವಾರಾಣಸಿಯ ರಸ್ತೆಗಳಲ್ಲಿ ಮದ್ಯವ್ಯಸನಿ ವ್ಯಕ್ತಿಗಳು ಇರುವುದನ್ನು ಗಮನಿಸಿದ್ದೇನೆ’ ಎಂಬ ಹೇಳಿಕೆಗೆ ರಾಹುಲ್ ಗಾಂಧಿ ಹೆಸರು ಉಲ್ಲೇಖಿಸದೇ ಪ್ರಧಾನಿ ಮೋದಿ ಅವರು ತಮ್ಮದೇ ದಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

‘ಎರಡು ದಶಕಗಳ ಕಾಲ ಮೋದಿ ವಿರುದ್ಧ ಅವಹೇಳನ ಮಾಡಿದ್ದ ಇವರು ಈಗ ಯುವಕರ ವಿರುದ್ಧ ಕಿಡಿಕಾರುತ್ತಿದ್ದಾರೆ. ಯಾರು ತಮ್ಮ ಪ್ರಜ್ಞೆಯಲ್ಲೇ ಇಲ್ಲದವರು, ನಮ್ಮ ಕಾಶಿ ಮಕ್ಕಳನ್ನು ಮಾದಕವ್ಯಸನಿಗಳು ಅನ್ನುತ್ತಿದ್ದಾರೆ. ಉತ್ತರಪ್ರದೇಶದ ಯುವಸಮುದಾಯದ ವಿರುದ್ಧದ ಇಂಡಿ ಒಕ್ಕೂಟದ ಈ ಹೇಳಿಕೆಯನ್ನು ಯಾರೂ, ಎಂದಿಗೂ ಮರೆಯುವುದಿಲ್ಲ’ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.

ಇದೇ ವೇಳೆ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ‘ತಮ್ಮ ಪಕ್ಷವು ಪಾರದರ್ಶಕ ನೇಮಕಾತಿ, ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಹಾಗೂ ಭ್ರಷ್ಟಾಚಾರ ನಿಯಂತ್ರಣಕ್ಕೆ ಕಾನೂನು ತರಲಿದೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಅಭ್ಯರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರು ಬೆಂಬಲಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.