ತಿರುವನಂತಪುರ: ದಲಿತ ಸಮುದಾಯಕ್ಕೆ ಸೇರಿದ ಶಾಸಕಿ ಧರಣಿ ನಡೆಸಿದ ಸ್ಥಳವನ್ನು ಶುದ್ಧೀಕರಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರ ನಡೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಹದಗೆಟ್ಟಿರುವ ರಸ್ತೆಗಳ ದುರಸ್ತಿಗೆ ಮುಂದಾಗಬೇಕು ಎಂದು ಆಗ್ರಹಿಸಿ ತ್ರಿಶ್ಯೂರ್ ಜಿಲ್ಲೆಯ ಚೇರ್ಪು ಗ್ರಾಮದ ಲೋಕೋಪಯೋಗಿ ಇಲಾಖೆ ಕಚೇರಿ ಮುಂಭಾಗದಲ್ಲಿ ಸಿಪಿಐನ ಸ್ಥಳೀಯ ಶಾಸಕಿ ಗೀತಾ ಗೋಪಿ ಅವರು ಶನಿವಾರ ಧರಣಿ ನಡೆಸಿದ್ದರು.
ಧರಣಿ ಅಂತ್ಯಗೊಂಡ ಬಳಿಕ ಸ್ಥಳಕ್ಕೆ ಬಂದ ಯುವ ಕಾಂಗ್ರೆಸ್ ಕಾರ್ಯಕರ್ತರು ಸಗಣಿ ಮಿಶ್ರಿತ ನೀರಿನಿಂದ ನೆಲವನ್ನು ಸಾರಿಸಿ
ಸಾಂಕೇತಿಕವಾಗಿ ಶುದ್ಧೀಕರಣ ನಡೆಸಿದ್ದರು. ’ಜನರನ್ನು ಮರುಳು ಮಾಡಲು ಶಾಸಕಿ ನಾಟಕವಾಡಿದ್ದಾರೆ’ ಎಂದೂ ಆರೋಪಿಸಿದ್ದರು. ಈ ಸಂಬಂಧ ಶಾಸಕಿ ಪೊಲೀಸರಿಗೆ ದೂರು ನೀಡಿದ್ದಾರೆ.
ಯುವ ಕಾಂಗ್ರೆಸ್ ಕಾರ್ಯಕರ್ತರ ನಡೆಯನ್ನು ಖಂಡಿಸಿರುವ ಕೇರಳದ ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಸಚಿವ ಎ.ಕೆ.ಬಾಲನ್ ಮತ್ತು ಆರೋಗ್ಯ ಸಚಿವೆ ಶೈಲಜಾ ಟೀಚರ್, ಈ ಕುರಿತು ತನಿಖೆಗೆ ಆಗ್ರಹಿಸಿದ್ದಾರೆ. ಹದಗೆಟ್ಟಿರುವ ರಸ್ತೆಗಳ ಚಿತ್ರವನ್ನು ಧರಣಿ ನಡೆಸಿದ ಬಳಿಕ ಶಾಸಕಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.