ADVERTISEMENT

ಚುನಾವಣಾ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ: ಎಚ್.ಡಿ.ರೇವಣ್ಣ ಆರೋಪ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 9:12 IST
Last Updated 5 ಏಪ್ರಿಲ್ 2018, 9:12 IST
ಎಚ್‌.ಡಿ. ರೇವಣ್ಣ
ಎಚ್‌.ಡಿ. ರೇವಣ್ಣ   

ಹಾಸನ: ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಬೆಳಕಿಗೆ ಬಂದಿದ್ದರೂ ಚುನಾವಣಾ ಅಧಿಕಾರಿಗಳು ಕ್ರಮಕೈಗೊಳ್ಳದೇ ಕಣ್ಮುಚ್ಚಿ ಕುಳಿತ್ತಿದ್ದಾರೆ ಎಂದು ಶಾಸಕ ಎಚ್.ಡಿ.ರೇವಣ್ಣ ಆರೋಪಿಸಿದರು.

ಬಾಗೂರು ಮಂಜೇಗೌಡ ಅವರು ಹೊಳೆನರಸೀಪುರ ವಿಧಾನ ಕ್ಷೇತ್ರದಲ್ಲಿ ನಿರಂತರ ಬಾಡೂಟ‌ ಆಯೋಜನೆ ಮಾಡುತ್ತಿದ್ದು,  ಮತದಾರರಿಗೆ ಆಮಿಷ ಒಡುತ್ತಿದ್ದಾರೆ. ಈ ವಿಚಾರ ಗೊತ್ತಿದ್ದರೂ ಅವರ‌ ವಿರುದ್ಧ ಕ್ರಮ ಜರುಗಿಸಿಲ್ಲ ಏಕೆ? ಎಂದು ಪ್ರಶ್ನಿಸಿದರು.

‘ರಾಜ್ಯ ಸಾರಿಗೆ ಇಲಾಖೆಯಲ್ಲಿ ಬ್ರೇಕ್ ಇನ್‌ಸ್ಪೆಕ್ಟರ್, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರೂ ಆಗಿರುವ ಮಂಜೇಗೌಡ, ತಮ್ಮ ಹುದ್ದೆಗೆ ಸಲ್ಲಿಸಿರುವ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಜಿಲ್ಲಾ ಅಬಕಾರಿ ಇಲಾಖೆಯ ಅಧಿಕಾರಿಗಳು ಕಾಂಗ್ರೆಸ್‌ನೊಂದಿಗೆ ಶಾಮೀಲಾಗಿದೆ’ ಎಂದು ಆರೋಪಿಸಿದರು.

ADVERTISEMENT

ಇದೇ ವೇಳೆ ಬಾಗೂರು ಮಂಜೇಗೌಡ ವಿರುದ್ಧ ಕೂಡಲೇ ಎಫ್ಐಆರ್ ದಾಖಲಿಸುವಂತೆ ರೇವಣ್ಣ ಒತ್ತಾಯಿಸಿದರು.

‘ನಮ್ಮ‌ ಪಕ್ಷದ‌ ಸಮಾವೇಶಕ್ಕೆ ಸಾರಿಗೆ ಬಸ್ಸುಗಳನ್ನು ನೀಡುತ್ತಿಲ್ಲ. ಆದರೆ ಬೆಂಗಳೂರಿನಲ್ಲಿ ನಡೆಯಲಿರುವ ರಾಹುಲ್ ಗಾಂಧಿ ಸಮಾವೇಶಕ್ಕೆ ಸಾವಿರಾರು ಬಸ್ಸುಗಳನ್ನು ನೀಡಲಾಗುತ್ತಿದೆ’ ಎಂದು ಕಿಡಿಕಾರಿದರು.

‘ಕಾಂಗ್ರೆಸ್‌ನವರಿಗೆ ಕುಮಾರಸ್ವಾಮಿಯನ್ನು ನೆನೆಯದೆ ಹೋದರೇ ನಿದ್ದೆ ಬರುವುದಿಲ್ಲ’ ಎಂದು ವ್ಯಂಗ್ಯವಾಡಿದರು.

ಕೆಲವೆಡೆ ಪೊಲೀಸ್‌ ವಾಹನಗಳಲ್ಲಿ ಹಣ ಸಾಗಣೆ ಮಾಡುವ ಹುನ್ನಾರ‌ ನಡೆದಿದ್ದು, ಈ ಬಗ್ಗೆ‌ ಚುನಾವಣಾ ಆಯೋಗ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.