ADVERTISEMENT

2ಎ ನೀಡಿದರೆ ಸನ್ಮಾನ, ಇಲ್ಲದಿದ್ದರೆ ಸತ್ಯಾಗ್ರಹ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಪ್ರತಿಜ್ಞಾ ಪಂಚಾಯತ್‌ ಕೊನೇ ಕಾರ್ಯಕ್ರಮದಲ್ಲಿ ಬಸವ ಜಯಮೃತ್ಯುಂಜಯ ಶ್ರೀ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 17:06 IST
Last Updated 30 ಸೆಪ್ಟೆಂಬರ್ 2021, 17:06 IST
ದಾವಣಗೆರೆಯಲ್ಲಿ ಪ್ರತಿಜ್ಞಾ ಪಂಚಾಯತ್‌ ಸಮಾವೇಶದ ಅಂಗವಾಗಿ ಗುರುವಾರ ನಡೆದ ಮೆರವಣಿಗೆಯಲ್ಲಿ ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಭಕ್ತರೆಡೆಗೆ ಹೂವು ಚೆಲ್ಲಿದರು.
ದಾವಣಗೆರೆಯಲ್ಲಿ ಪ್ರತಿಜ್ಞಾ ಪಂಚಾಯತ್‌ ಸಮಾವೇಶದ ಅಂಗವಾಗಿ ಗುರುವಾರ ನಡೆದ ಮೆರವಣಿಗೆಯಲ್ಲಿ ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಭಕ್ತರೆಡೆಗೆ ಹೂವು ಚೆಲ್ಲಿದರು.   

ದಾವಣಗೆರೆ: ‘ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಲಾಗುವುದು. ಇಲ್ಲದೇ ಇದ್ದರೆ ಸತ್ಯಾಗ್ರಹ ಮುಂದುವರಿಸಲಾಗುವುದು’ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದರು.

ನಗರದ ತ್ರಿಶೂಲ್‌ ಕಲಾ ಭವನದಲ್ಲಿ ಗುರುವಾರ ನಡೆದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್‌ ಕೊನೇ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪಂಚಮಸಾಲಿ ಸಮಾಜ ಎಲ್ಲರನ್ನೂ ನಂಬುವ ಸಮಾಜ. ಹಿಂದೆ ಬಿ.ಎಸ್‌. ಯಡಿಯೂರಪ್ಪ ಅವರನ್ನು ನಂಬಿತ್ತು. ಅವರು ಕೈಕೊಟ್ಟರು. ಈಗ ಬಸವರಾಜ ಬೊಮ್ಮಾಯಿ ಅವರನ್ನು ನಂಬಿದ್ದೇವೆ. ಪಂಚಮಸಾಲಿ, ಗೌಡ ಲಿಂಗಾಯತ, ಮಲೇಗೌಡ, ದೀಕ್ಷಾ ಲಿಂಗಾಯತರನ್ನು ಒಳಗೊಂಡ ಈ ಸಮಾಜಕ್ಕೆ 2ಎ ನೀಡಬೇಕು. ಅ.1ರಂದು ಬೆಂಗಳೂರಿ
ನಲ್ಲಿ ಜೆ.ಎಚ್‌. ಪಟೇಲ್‌ ಜನ್ಮದಿನಾಚರಣೆ, ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲಿ ಮುಖ್ಯಮಂತ್ರಿ ಅಥವಾ ಅವರ ಪ್ರತಿನಿಧಿಗಳು ಬಂದು ಮೀಸಲಾತಿ ಬಗ್ಗೆ ಸ್ಪಷ್ಟಪಡಿಸಬೇಕು’ ಎಂದರು. ‘2ಎ ಮೀಸಲಾತಿ ನೀಡಿದರೆ ಮುಖ್ಯಮಂತ್ರಿ ಅವರನ್ನು ಕಲ್ಲುಸಕ್ಕರೆಯಲ್ಲಿ ತುಲಾಭಾರ ಮಾಡಿ ಸನ್ಮಾನಿಸಲಾಗುವುದು. ಜತೆಗೆ ಕಿತ್ತೂರು ರಾಣಿ ಚನ್ನಮ್ಮರ ಫೋಟೊ ಜತೆಗೆ ಬೊಮ್ಮಾಯಿ ಅವರ ಫೋಟೊ ಇಟ್ಟು ಗೌರವಿಸಲಾಗುವುದು’ ಎಂದರು.

ADVERTISEMENT

‘ಇಂದೇ ಘೋಷಣೆ ಕಷ್ಟ’

‘ಮುಖ್ಯಮಂತ್ರಿ ಜತೆಗೆ ಸಂಪರ್ಕದಲ್ಲಿದ್ದೇನೆ. ಅ.1ರಂದೇ ಮೀಸಲಾತಿ ಘೋಷಣೆ ಆಗದು. ಹಿಂದುಳಿದ ವರ್ಗಗಳ ಆಯೋಗಕ್ಕೆ ಈ ಬಗ್ಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಅವರು ವರದಿ ನೀಡಬೇಕು. ಬಳಿಕ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲು ಸಾಧ್ಯ’ ಎಂದು ಶಾಸಕ ಅರವಿಂದ ಬೆಲ್ಲದ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.