ADVERTISEMENT

ಚಿತ್ರದುರ್ಗ: ಕಳವಿಗೆ ಹೋಗದಂತೆ ತಡೆದ ತಂದೆಯನ್ನು ಕೊಂದ ಮಗ

ನಾಯಕನಹಟ್ಟಿ ಹೋಬಳಿಯ ಮಲ್ಲೂರಹಳ್ಳಿ ಭರಮಸಾಗರ ಕಪಿಲೆಯಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 19:45 IST
Last Updated 25 ಜನವರಿ 2022, 19:45 IST
ಗುಡ್ಲು ಮಲ್ಲಯ್ಯ- ಲೋಕೇಶ
ಗುಡ್ಲು ಮಲ್ಲಯ್ಯ- ಲೋಕೇಶ   

ನಾಯಕನಹಟ್ಟಿ (ಚಿತ್ರದುರ್ಗ): ಕಳವು ಮಾಡಲು ಹೋಗುತ್ತಿದ್ದ ಮಗನನ್ನು ತಡೆಯಲು ಮುಂದಾದ ತಂದೆಯನ್ನು ಒದ್ದು ಕೊಲೆ ಮಾಡಿದ ಪ್ರಕರಣ ನಾಯಕನಹಟ್ಟಿ ಹೋಬಳಿಯ ಮಲ್ಲೂರಹಳ್ಳಿ ಭರಮಸಾಗರ ಕಪಿಲೆ ಯಲ್ಲಿ ಸೋಮವಾರ ಮಧ್ಯೆ ರಾತ್ರಿ ನಡೆದಿದೆ.

ಗುಡ್ಲು ಮಲ್ಲಯ್ಯ (70) ಹತ್ಯೆಗೀಡಾದವರು. ಮಗ ಲೋಕೇಶ (28) ಕೃತ್ಯವೆಸಗಿದ ಆರೋಪಿ.

ಲೋಕೇಶ ಹಲವು ದಿನಗಳಿಂದ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈ ಬಗ್ಗೆ ನಾಯಕನಹಟ್ಟಿ, ತಳಕು ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿದ್ದವು. ಇದರಿಂದ ಇಡೀ ಕುಟುಂಬ ತಲೆತಗ್ಗಿಸುವ ಸನ್ನಿವೇಶ ಎದುರಾಗಿತ್ತು. ‘ಕಳವು ಮಾಡಬೇಡ ಎಂದು ಕುಟುಂಬದ ಎಲ್ಲ ಸದಸ್ಯರು ಹಲವು ಬಾರಿ ಬುದ್ಧಿವಾದ ಹೇಳಿದರೂ ಲೋಕೇಶ ಕೃತ್ಯವೆಸಗುವುದನ್ನು ಬಿಟ್ಟಿರಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸೋಮವಾರ ರಾತ್ರಿ ಇದೇ ವಿಷಯಕ್ಕೆ ತಂದೆ ಮತ್ತು ಮಗನ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಹಗ್ಗದಿಂದ ಮಗನ ಕೈಕಾಲುಗಳನ್ನು ಕಟ್ಟಿಹಾಕಿದರೆ ಎಲ್ಲಿಯೂ ಹೋಗುವುದಿಲ್ಲ ಎಂದು ತಿಳಿದ ಮಲ್ಲಯ್ಯ ಹಗ್ಗ ಹಿಡಿದು ಕೈಕಾಲು ಕಟ್ಟಲು ಮುಂದಾದರು. ಈ ವೇಳೆ ಲೋಕೇಶನು ಕಾಲಿನಿಂದ ಜೋರಾಗಿ ಗುಡ್ಲುಮಲ್ಲಯ್ಯನ ಹೊಟ್ಟೆಗೆ ಒದ್ದಿದ್ದಾನೆ. ಒದ್ದ ರಭಸಕ್ಕೆ ಹಿಂದಕ್ಕೆ ಬಿದ್ದು ಗುಡ್ಲುಮಲ್ಲಯ್ಯ ಸ್ಥಳದಲ್ಲಿಮೃತಪಟ್ಟರು. ಇದರಿಂದ ಗಾಬರಿಗೊಂಡ ಮನೆಯ ಇತರೆ ಸದಸ್ಯರು ಲೋಕೇಶನನ್ನು ಹಿಡಿದು ಮರಕ್ಕೆ ಕಟ್ಟಿಹಾಕಿ ಮಂಗಳವಾರ ಬೆಳಿಗ್ಗೆ ನಾಯಕನಹಟ್ಟಿ ಪೊಲೀಸರಿಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.