(ಸಾಂದರ್ಭಿಕ ಚಿತ್ರ)
ಕೊಪ್ಪಳ: ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದ ಪ್ರಸಾದ ನಿಲಯದ ಸಮೀಪದ ಮುಳ್ಳುಕಂಟೆಯಲ್ಲಿ ಮಂಗಳವಾರ ನವಜಾತು ಹೆಣ್ಣು ಶಿಶು ಪತ್ತೆಯಾಗಿದ್ದು, ಸಾರ್ವಜನಿಕರ ಕಾಳಜಿಯಿಂದ ಮಗು ಬದುಕುಳಿದಿದೆ.
ಶಿಶು ಅಳುವ ಸದ್ದು ಮುಳ್ಳಿನ ಕಂಟಿಯಿಂದ ಕೇಳಿಬಂದಾಗ ಸಾರ್ವಜನಿಕರು ಅಲ್ಲಿನ ಹೋಂ ಗಾರ್ಡ್ ಸಿಬ್ಬಂದಿ ಗಮನಕ್ಕೆ ತಂದು ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಶಿಶುವನ್ನು ರಕ್ಷಣೆ ಮಾಡಿ ಸ್ಥಳೀಯ ಆಸ್ಪತ್ರೆಯಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಜಿಲ್ಲಾಕೇಂದ್ರದಲ್ಲಿರುವ ತಾಯಿ ಮತ್ತು ಮಗುವಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಪ್ರತಿ ಮಂಗಳವಾರ ಲಕ್ಷಾಂತರ ಭಕ್ತರು ಬರುವುದು ಸಾಮಾನ್ಯ. ಇಷ್ಟೊಂದು ಜನರ ನಡುವೆಯೂ ಪೋಷಕರು ಶಿಶುವನ್ನು ಬೀಸಾಡಿ ಪರಾರಿಯಾಗಿದ್ದು ಹೇಗೆ ಎನ್ನುವುದು ಚರ್ಚೆಗೆ ಕಾರಣವಾಗಿದೆ. ಮಗು ಜನಿಸಿ ಕೆಲವು ಗಂಟೆಗಳಷ್ಟೇ ಆಗಿತ್ತು. ಕರಳು ಬಳ್ಳಿ ಕೂಡ ಶಿಶುವಿನೊಂದಿಗೆ ಇತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಶಿಶುವನ್ನು ಎತ್ತಿಕೊಂಡು ಸಮಾಧಾನ ಮಾಡಲು ಸ್ಥಳೀಯರು ಪ್ರಯತ್ನಿಸಿದ್ದಾರೆ. ಅಮ್ಮನ ಎದೆಹಾಲು ಇಲ್ಲದೆ ಹಸಿವಿನಿಂದ ಮಗು ಒದ್ದಾಡಿದೆ. ಶಿಶುವಿನ ತೂಕ 2.4 ಕೆ.ಜಿ. ಹೋಂಗಾರ್ಡ್ಗಳಾದ ಶಿವಕುಮಾರ್ ಹಾಗೂ ಮಾರುತಿ ಅವರ ಸಮಯ ಪ್ರಜ್ಜೆಯಿಂದ ಶಿಶು ಬದುಕಿದೆ. ಮುಳ್ಳಿನ ಕಂಟಿಯಲ್ಲಿ ಬಿದ್ದಿದ್ದರಿಂದ ಶಿಶುವಿಗೆ ಹುಳುಗಳು ಕಚ್ಚಿ ನಂಜಾಗಿರುವ ಸಾಧ್ಯತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.