ADVERTISEMENT

ಎಸಿಬಿ ದಾಳಿ: ಬೆಸ್ಕಾಂ ಇ.ಇ ಬಳಿ ಕೋಟ್ಯಂತರ ಮೌಲ್ಯ ಆಸ್ತಿ ಪತ್ತೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 16:24 IST
Last Updated 30 ಮಾರ್ಚ್ 2022, 16:24 IST
ಎಸಿಬಿ
ಎಸಿಬಿ   

ಬೆಂಗಳೂರು: ವಿದ್ಯುತ್‌ ಸಂಪರ್ಕ ಕಲ್ಪಿಸಲು ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿದ್ದ ಬೆಸ್ಕಾಂ ಉತ್ತರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಎಲ್‌.ಎಸ್‌. ಲಕ್ಷ್ಮೀಶ್‌ ಬಳಿ ಎರಡು ಫ್ಲ್ಯಾಟ್‌, ಐದು ನಿವೇಶನ ಸೇರಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಇರುವುದು ಪತ್ತೆಯಾಗಿದೆ.

ಸೋಮವಾರ ವ್ಯಕ್ತಿಯೊಬ್ಬರಿಂದ ₹ 10,000 ಲಂಚ ಪಡೆಯುತ್ತಿದ್ದ ಅಧಿಕಾರಿಯನ್ನು ಎಸಿಬಿ ಬಂಧಿಸಿತ್ತು. ಮಾಗಡಿ ರಸ್ತೆಯ ಪ್ರೆಸ್ಟೀಜ್‌ ವುಡ್ಸ್‌ ಅಪಾರ್ಟ್‌ಮೆಂಟ್‌ನಲ್ಲಿರುವ ಆರೋಪಿಯ ಮನೆ ಹಾಗೂ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನಲ್ಲಿರುವ ವಾಸದ ಮನೆಗಳ ಮೇಲೆ ಬುಧವಾರ ದಾಳಿಮಾಡಿದ ಎಸಿಬಿ ಅಧಿಕಾರಿಗಳು ಶೋಧ ನಡೆಸಿದರು.

ಬೆಂಗಳೂರಿನಲ್ಲಿ ಎರಡು ಫ್ಲ್ಯಾಟ್‌, ಮೂರು ನಿವೇಶನ, ಮೈಸೂರಿನಲ್ಲಿ ಎರಡು ನಿವೇಶನ, ರಾಮನಗರ ಜಿಲ್ಲೆಯ ಬೀಗೆಹಳ್ಳಿಯಲ್ಲಿ 2 ಎಕರೆ 8 ಗುಂಟೆ ಕೃಷಿ ಜಮೀನು, ಅರಸೀಕೆರೆ ತಾಲ್ಲೂಕಿನಲ್ಲಿ 3 ಎಕರೆ ಕೃಷಿ ಜಮೀನು ಹೊಂದಿರುವುದು ಪತ್ತೆಯಾಗಿದೆ. ಮನೆಯಲ್ಲಿ ₹ 9.90 ಲಕ್ಷ ನಗದು, ₹ 5.78 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನೂ ಪತ್ತೆಮಾಡಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಆರೋಪಿಯ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಶೋಧನಾ ಕಾರ್ಯವು ಮುಂದುವರಿದಿದೆ. ಆರೋಪಿಯು ಹೊಂದಿರುವ ಆಸ್ತಿಯ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.