ADVERTISEMENT

ಭೂಮಿತಾಯಿ ಮಡಿಲು ಸೇರಿದ ಸಂಚಾರಿ ವಿಜಯ್‌: ಹುಟ್ಟೂರಲ್ಲಿ ಕಣ್ಣೀರ ವಿದಾಯ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 12:32 IST
Last Updated 15 ಜೂನ್ 2021, 12:32 IST
ಪಂಚನಹಳ್ಳಿಯಲ್ಲಿ ವಿಜಯ್‌ ಅಂತಿಮ ವಿಧಿವಿಧಾನ
ಪಂಚನಹಳ್ಳಿಯಲ್ಲಿ ವಿಜಯ್‌ ಅಂತಿಮ ವಿಧಿವಿಧಾನ    

ಚಿಕ್ಕಮಗಳೂರು: ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್‌ (ಬಿ. ವಿಜಯಕುಮಾರ್‌) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಕಡೂರು ತಾಲ್ಲೂಕಿನ ಪಂಚನಹಳ್ಳಿಯಲ್ಲಿ ಮಂಗಳವಾರ ನೆರವೇರಿತು.

ವಿಜಯ್‌ ಅವರ ಸ್ನೇಹಿತ ರಾಘವೇಂದ್ರ ಅವರ ತೋಟದಲ್ಲಿ ವೀರಶೈವ ಸಂಪ್ರದಾಯದಂತೆ ಮಂಗಳವಾರ ಮಧ್ಯಾಹ್ನ 3.15ಕ್ಕೆ ಅಂತ್ಯಸಂಸ್ಕಾರ ನೆರವೇರಿತು.

ಆಡಿ ಬೆಳೆದ ಊರಿನ ಮಣ್ಣಿನಲ್ಲಿ ವಿಜಯ್‌ ಲೀನವಾದರು.

ADVERTISEMENT

ಹಿರಿಯ ಸಹೋದರ ವಿರೂಪಾಕ್ಷ ಮತ್ತು ಕಿರಿಯ ಸಹೋದರ ಸಿದ್ದೇಶ್‌ ಅವರು ವಿಧಿ ವಿಧಾನಗಳನ್ನು ನೆರವೇರಿಸಿದರು. ಕುಪ್ಪೂರು ಗದ್ದಿಗೆ ಮಠದ ಯತೀಶ್ವರ ಸ್ವಾಮೀಜಿ, ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ ಅವರು ಕ್ರಿಯಾವಿಧಿ ನಿರ್ವಹಿಸಿದರು.

ಅಂತಿಮ ದರ್ಶನಕ್ಕೆ ಅವಕಾಶ: ಪಾರ್ಥಿವ ಶರೀರವನ್ನು ತೋಟದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಮಧ್ಯಾಹ್ನ 2.30ರಿಂದ 3 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿತ್ತು. ಕುಟುಂಬಸ್ಥರು, ಜನರು ಸರದಿಯಲ್ಲಿ ತೆರಳಿ ಅಂತಿಮ ದರ್ಶನ ಪಡೆದರು.

ರಾಷ್ಟ್ರಗೀತೆ ನುಡಿಸಿ, ಮೂರು ಸುತ್ತು ಕುಶಾಲ ತೋಪು ಹಾರಿಸಿ ಗೌರವ ಸಲ್ಲಿಸಲಾಯಿತು. ಒಂದು ನಿಮಿಷ ಮೌನ ಆಚರಿಸಲಾಯಿತು.
ಅಂತ್ಯ ಸಂಸ್ಕಾರದ ಸ್ಥಳಕ್ಕೆ ಸುತ್ತಮುತ್ತಲ ಗ್ರಾಮಗಳ ಜನರು ಜಮಾಯಿಸಿದ್ದರು. ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿತ್ತು.

ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ, ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ, ಮುಖಂಡ ವೈಎಸ್‌ವಿ ದತ್ತ, ನಿರ್ದೇಶಕರಾದ ಮನ್ಸೂರೆ, ಬಿ.ಎಸ್.ಲಿಂಗದೇವರು, ನಟರಾದ ನೀನಾಸಂ ಸತೀಶ್‌, ಕಡೂರು ನಟರಾಜ್, ಕಡೂರು ಧರ್ಮಣ್ಣ ಇದ್ದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.