ADVERTISEMENT

ಕೊಡವರನ್ನು ಎಸ್.ಟಿ ಪಟ್ಟಿಗೆ ಸೇರಿಸಿ: ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 14:26 IST
Last Updated 18 ಜನವರಿ 2020, 14:26 IST
ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಕಡಗದಾಳುವಿನ ಕ್ಯಾಪಿಟಲ್ ವಿಲೇಜ್‌ನಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಬುಡಕಟ್ಟು ಸ್ಥಾನ ಮಾನದ ಹೋರಾಟಕ್ಕೆ ಬೆಂಬಲಿಸುವ ಪ್ರತಿಜ್ಞೆ ಸ್ವೀಕರಿಸಲಾಯಿತು
ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಕಡಗದಾಳುವಿನ ಕ್ಯಾಪಿಟಲ್ ವಿಲೇಜ್‌ನಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಬುಡಕಟ್ಟು ಸ್ಥಾನ ಮಾನದ ಹೋರಾಟಕ್ಕೆ ಬೆಂಬಲಿಸುವ ಪ್ರತಿಜ್ಞೆ ಸ್ವೀಕರಿಸಲಾಯಿತು   

ಮಡಿಕೇರಿ: ನೈಜ ಬುಡಕಟ್ಟು ಹೊಂದಿರುವ ಕೊಡವ ಸಮುದಾಯದವರನ್ನು ಎಸ್‌.ಟಿ ಪಟ್ಟಿಗೆ ಸೇರಬೇಕಾದ ತುರ್ತು ಅವಶ್ಯಕತೆ ಸರ್ಕಾರಕ್ಕಿದೆ ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಇಲ್ಲಿ ಹೇಳಿದರು.

ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಕಡಗದಾಳು ಕ್ಯಾಪಿಟಲ್ ವಿಲೇಜ್‌ನಲ್ಲಿ ಶನಿವಾರ ನಡೆದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಕಾಶ್ಮೀರ ಹೇಗೆ ಭಾರತದ ಕಿರೀಟವೋ, ಹಾಗೆಯೇ ಕೊಡವರು ಮತ್ತವರ ನೆಲ ಕರ್ನಾಟಕದ ಕಣ್ಮಣಿ. ಇವರನ್ನು ಎಸ್.ಟಿ ಪಟ್ಟಿಗೆ ಸೇರಿಸಿ ಉಳಿಸಿ ಸಂರಕ್ಷಿಸುವುದು ಸರ್ಕಾರಗಳ ಜವಾಬ್ದಾರಿ. ಪಕ್ಷಭೇದ ಮರೆತು ಕೊಡವರು ಒಕ್ಕೊರಲಿನಿಂದ ಸಿ.ಎನ್.ಸಿ ಬೆಂಬಲಿಸಬೇಕೆಂದು’ ಅವರು ಮನವಿ ಮಾಡಿದರು.

ADVERTISEMENT

ಕೊಡವರಿಗೆ ಅಕ್ಷರ ಜ್ಞಾನ ಇರಬಹುದು. ಆದರೆ, ಇಂದಿನ ಸಂವಿಧಾನಿಕ ಶಿಕ್ಷಣವಿಲ್ಲ. ಅಕ್ಷರ ಜ್ಞಾನವಿದ್ದು ಅವಕಾಶ ವಂಚಿತರಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ ಮಾತನಾಡಿ, ದೇಶದಲ್ಲಿ 655 ಸಮುದಾಯವನ್ನು ಬುಡಕಟ್ಟು ವರ್ಗವೆಂದು ಗುರುತಿಸಲಾಗಿದೆ. ಇವರಲ್ಲಿ 330 ಬುಡಕಟ್ಟನ್ನು ಎಸ್‌ಟಿ ಪಟ್ಟಿಯಲ್ಲಿ ಸೇರಿಸಿ ರಾಜ್ಯಾಂಗ ಭದ್ರತೆ ಕಲ್ಪಿಸಲಾಗಿದೆ. ಇದರಲ್ಲಿ ಕೊಡವರು ಸೇರುವ ಅವಕಾಶವಿದೆ ಎಂದು ಸ್ಪಷ್ಟಪಡಿಸಿದರು.

ಕೊಡಗಿಗೆ ಸೀಮಿತವಾದ ಈ ಸಮುದಾಯವನ್ನು ಎಸ್.ಟಿ ಪಟ್ಟಿಗೆ ಸೇರಿಸುವ ಮೂಲಕ ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ನಾಚಪ್ಪ ಅವರ ನೇತೃತ್ವದ ಸುದೀರ್ಘ ಹೋರಾಟಕ್ಕೆ ಕೊಡವರು ಬೆಂಬಲಿಸಬೇಕು ಎಂದು ಕೋರಿದರು.

ಅಂಚೆಟ್ಟಿರ ಮನು ಮುದ್ದಪ್ಪ ಅವರ ನೇತೃತ್ವದ ಮುಕ್ಕೋಡ್ಲು ವ್ಯಾಲಿ ಡ್ಯೂ ಅಸೋಸಿಯೇಷನ್ ಅವರಿಂದ ಕತ್ತಿಯಾಟ್ ಪ್ರದರ್ಶನ ನಡೆಯಿತು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಬ್ರಿಜೇಷ್ ಕಾಳಪ್ಪ, ಚೇಂದಂಡ ಜಮ್ಸಿ ಪೊನ್ನಪ್ಪ, ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಾಚರಣಿಯಂಡ ಅಪ್ಪಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.