ADVERTISEMENT

ಮೌಲ್ಯಯುತ ಶಿಕ್ಷಣ ಇಂದಿನ ಅಗತ್ಯ: ಆದಿಚುಂಚನಗಿರಿ ಶ್ರೀ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 22:51 IST
Last Updated 6 ಫೆಬ್ರುವರಿ 2026, 22:51 IST
ಎಚ್‌ಎಂಆರ್‌ ಸಮೂಹ ವಿದ್ಯಾಸಂಸ್ಥೆ ಹಮ್ಮಿಕೊಂಡಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಎಚ್.ಎಂ.ರಮೇಶ್‌ ಗೌಡ, ಸೀಮಾಂತ್‌ಕುಮಾರ್‌ ಸಿಂಗ್‌, ನಿರ್ಮಲಾನಂದನಾಥ ಸ್ವಾಮೀಜಿ, ನ್ಯಾಯಮೂರ್ತಿ ಬಿ.ವೀರಪ್ಪ, ರಮ್ಯಾ ರಮೇಶ್‌ ಭಾಗವಹಿಸಿದ್ದರು.
ಎಚ್‌ಎಂಆರ್‌ ಸಮೂಹ ವಿದ್ಯಾಸಂಸ್ಥೆ ಹಮ್ಮಿಕೊಂಡಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಎಚ್.ಎಂ.ರಮೇಶ್‌ ಗೌಡ, ಸೀಮಾಂತ್‌ಕುಮಾರ್‌ ಸಿಂಗ್‌, ನಿರ್ಮಲಾನಂದನಾಥ ಸ್ವಾಮೀಜಿ, ನ್ಯಾಯಮೂರ್ತಿ ಬಿ.ವೀರಪ್ಪ, ರಮ್ಯಾ ರಮೇಶ್‌ ಭಾಗವಹಿಸಿದ್ದರು.   

ಬೆಂಗಳೂರು: ‘ಬಾಲ್ಯದಲ್ಲಿ ಕಲಿಯುವ ಉತ್ತಮ ಸಂಸ್ಕಾರ, ಶಿಕ್ಷಣ ಜೀವನದ ಕೊನೆಯವರೆಗೂ ಇರುತ್ತದೆ. ಹಾಗಾಗಿ, ಶಿಕ್ಷಣ ಸಂಸ್ಥೆಗಳು ಸಂಸ್ಕಾರ ಒಳಗೊಂಡ ಮೌಲ್ಯಯುತ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು’ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಎಚ್‌ಬಿಆರ್‌ ಲೇಔಟ್‌ನ ಎಚ್‌ಎಂಆರ್‌ ಸಮೂಹ ವಿದ್ಯಾ ಸಂಸ್ಥೆ ಹಮ್ಮಿಕೊಂಡಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. 

‘ಜನರಿಗೆ ವೈಜ್ಞಾನಿಕ ಮನೋಭಾವದಷ್ಟೇ ಸಮಾಜದ ಮೌಲ್ಯಗಳು ಮುಖ್ಯ. ವಿಶ್ವದ ದೇಶಗಳು ವಿಜ್ಞಾನ, ತಂತ್ರಜ್ಞಾನದಲ್ಲಿ ಎಷ್ಟೇ ಸಾಧನೆ ಮಾಡಿದರೂ ನೆಲದ ಸಂಸ್ಕಾರ, ಸಂಸ್ಕೃತಿ, ನಂಬಿಕೆ, ಮೌಲ್ಯಗಳ ಬೇರುಗಳನ್ನು ಜತನದಿಂದ ಕಾಪಾಡಿಕೊಳ್ಳಬೇಕು. ಆಗ ಮಾತ್ರ ವಿಜ್ಞಾನದ ಸಾಧನೆಗಳು ಸಾರ್ಥಕವಾಗುತ್ತವೆ. ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ’ ಎಂದರು. 

ADVERTISEMENT

ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಮಾತನಾಡಿ, ‘ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಉತ್ತಮ ಕೆಲಸ ಪಡೆದರೆ ಸಾಲದು, ಭ್ರಷ್ಟಾಚಾರಕ್ಕೆ ಆಸ್ಪದ ನೀಡದೆ ಸಮಾಜದ ಜನರ ಋಣ ತೀರಿಸುವ ಪ್ರಾಮಾಣಿಕ ಅಧಿಕಾರಿ, ಸಿಬ್ಬಂದಿಗಳಾಗಬೇಕು. ಪ್ರಸ್ತುತ ಸನ್ನಿವೇಶದಲ್ಲಿ ಅಂತಹ ಪ್ರಾಮಾಣಿಕರ ಸಂಖ್ಯೆ ಕ್ಷೀಣಿಸುತ್ತಿರುವುದು ಆತಂಕದ ವಿಷಯ’ ಎಂದು ಹೇಳಿದರು.

ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಸೀಮಾಂತ್‌ ಕುಮಾರ್ ಸಿಂಗ್‌ ಅವರು ಸಮಾಜದಲ್ಲಿ ನಡೆಯುತ್ತಿರುವ ಅಪರಾಧ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.

ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ಎಂ.ರಮೇಶ್‌ ಗೌಡ, ಸಿಇಒ ಎ.ರಮ್ಯಾ ರಮೇಶ್‌, ಪ್ರಾಂಶುಪಾಲರಾದ ಅಶ್ವಿನಿ ಆನಂದ್‌ ರತ್ನಮಾಲಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.