ADVERTISEMENT

ಬನ್ನೇರುಘಟ್ಟಕ್ಕೆ ಆಫ್ರಿಕಾ ಚೀತಾ: ಏಪ್ರಿಲ್‌ನಲ್ಲಿ ಸಾರ್ವಜನಿಕ ವೀಕ್ಷಣೆಗೆ ಲಭ್ಯ

ಉಮೇಶ ಭಟ್ಟ ಪಿ.ಎಚ್.
Published 19 ಫೆಬ್ರುವರಿ 2026, 5:01 IST
Last Updated 19 ಫೆಬ್ರುವರಿ 2026, 5:01 IST
   

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವು(ಬಿಬಿಪಿ) ಮೊದಲ ಬಾರಿಗೆ ಆಫ್ರಿಕನ್‌ ಚೀತಾಗಳ ಪ್ರದರ್ಶನಕ್ಕೆ ಅಣಿಯಾಗುತ್ತಿದೆ. ಮಾರ್ಚ್‌ ಮೊದಲ ವಾರದಲ್ಲಿ ದಕ್ಷಿಣ ಆಫ್ರಿಕಾದಿಂದ ಚೀತಾಗಳು ಬೆಂಗಳೂರು ತಲುಪಲಿದ್ದು, ಏಪ್ರಿಲ್‌ನಲ್ಲಿ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗಲಿವೆ.

ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ನಂತರ ಕರ್ನಾಟಕದಲ್ಲಿ ಚೀತಾಗಳನ್ನು ಪ್ರದರ್ಶಿಸಲಿರುವ ಎರಡನೇ ಮೃಗಾಲಯವಿದು. ಭಾರತದಲ್ಲಿ 13 ವರ್ಷದಿಂದ ಹೈದ್ರಾಬಾದ್‌ನ ನೆಹರೂ ಜ್ಯೂವಾಲಾಜಿಕಲ್‌ ಪಾರ್ಕ್‌ನಲ್ಲಿ ಚೀತಾಗಳ ಪ್ರದರ್ಶನವಿದ್ದರೆ, ಆರು ವರ್ಷದಿಂದ ಮೈಸೂರು ಮೃಗಾಲಯವು ಪ್ರದರ್ಶನ ಮಾಡುತ್ತಿದೆ. ಅಲ್ಲಿ ಮೂರು ಚೀತಾಗಳಿವೆ.

ಪ್ರಾಣಿ ವಿನಿಮಯ ಯೋಜನೆಯಡಿ ನಾಲ್ಕು ಆನೆಗಳನ್ನು ನೀಡಿ ನಾಲ್ಕು ಚೀತಾಗಳನ್ನು ಪಡೆಯಲು ಕಳೆದ ವರ್ಷವೇ  ಒಪ್ಪಂದ ಆಗಿತ್ತು. ಆನೆಗಳನ್ನು ಬನ್ನೇರುಘಟ್ಟ ಉದ್ಯಾನದಿಂದ ರವಾನಿಸಲಾಗಿತ್ತು. ಈಗ ಚೀತಾಗಳು ಇಲ್ಲಿಗೆ ಬರುತ್ತಿವೆ. ಈ ತಿಂಗಳಲ್ಲಿಯೇ ಎಂಟು ಕೆಪುಚಿನ್‌ ಕೋತಿಗಳನ್ನೂ ದಕ್ಷಿಣ ಆಫ್ರಿಕಾದಿಂದ ಬನ್ನೇರುಘಟ್ಟಕ್ಕೆ ತರಲಾಗಿದೆ. ಕಳೆದ ವರ್ಷ ಹೆಣ್ಣು ಹುಲಿ, ಜಂಗಲ್‌ ಕ್ಯಾಟ್‌ಗಳನ್ನು ತರಿಸಲಾಗಿತ್ತು.

ADVERTISEMENT

ಚೀತಾಗಳನ್ನು ಇರಿಸಲು ಪ್ರತ್ಯೇಕ ಜಾಗವನ್ನು ಅಣಿಗೊಳಿಸಲಾಗಿದೆ. ವೇಗವಾಗಿ ಓಡುವ ಈ ಪ್ರಾಣಿಗಳಿಗೆ ವಿಶಾಲ ಜಾಗವೇ ಬೇಕಾಗಿರುವುದರಿಂದ ಜನರ ವೀಕ್ಷಣೆಗೂ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ.

‘ನಮ್ಮಲ್ಲಿ ಚಿರತೆಗಳ ಸಫಾರಿ ಇದೆ. ಆದರೆ ಚೀತಾಗಳು ಪ್ರವಾಸಿಗರಿಗೆ ವಿಶೇಷ ಆಕರ್ಷಣೆಯಾಗಬಲ್ಲವು ಎನ್ನುವ ಕಾರಣದಿಂದ ಅವುಗಳನ್ನು ತರಲು ಪ್ರಯತ್ನಗಳು ನಡೆದಿದ್ದವು. ಈಗ ಪ್ರಕ್ರಿಯೆ ಪೂರ್ಣಗೊಂಡು ದಕ್ಷಿಣಾ ಆಫ್ರಿಕಾದ ಸಂರಕ್ಷಣಾ ಕೇಂದ್ರವೊಂದರಿಂದ ನಮ್ಮಲ್ಲಿಗೆ ತರಲು ಸಿದ್ದತೆ ಮಾಡಿಕೊಂಡಿದ್ದೇವೆ. ಚೀತಾಗಳನ್ನು ಒಂದು ತಿಂಗಳು ಕ್ವಾರಂಟೈನ್‌ನಲ್ಲಿ ಇರಿಸಿ ಪ್ರದರ್ಶನ ಆರಂಭಿಸುತ್ತೇವೆ’ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಎ.ವಿ.ಸೂರ್ಯಸೇನ್‌ ತಿಳಿಸಿದರು.

ಗಂಟೆಗೆ 110 ಕಿ.ಮೀಗೂ ಹೆಚ್ಚಿನ ವೇಗದ ಓಟಕ್ಕೆ ಚೀತಾ ಹೆಸರುವಾಸಿ. ಇವು ಭಾರತದ ಚಿರತೆಗಳಿಗಿಂತ ಭಿನ್ನ. ಭಾರತದಲ್ಲಿ ಚೀತಾ ಪುನರುಜ್ಜೀವಗೊಳಿಸುವ ಯೋಜನೆಯನ್ನು ಕೇಂದ್ರ ಸರ್ಕಾರದ ಅರಣ್ಯ, ಪರಿಸರ ಸಚಿವಾಲಯ ಜಾರಿಗೊಳಿಸಿದೆ. ಈಗಾಗಲೇ ಮಧ್ಯಪ್ರದೇಶದ ಕುನ್ಹಾದಲ್ಲಿ ಯೋಜನೆಯೂ ಜಾರಿಯಾಗಿದೆ. ಇದರ ನಡುವೆ ಮೃಗಾಲಯಗಳಲ್ಲೂ ಇವುಗಳ ಪ್ರದರ್ಶನಕ್ಕೆ ಒತ್ತು ನೀಡಲಾಗುತ್ತಿದೆ.

ಬನ್ನೇರಘಟ್ಟದಲ್ಲಿ ಸದ್ಯ 85 ಚಿರತೆಗಳಿವೆ.  20 ಹುಲಿ, 27 ಸಿಂಹಗಳಿವೆ. ಇದಲ್ಲದೇ ಒಂಬತ್ತು ಜೀಬ್ರಾ, ಎರಡು ಜಿರಾಫೆ, 29 ಆನೆಗಳ ಸಹಿತ 2,000 ವಿವಿಧ ಪ್ರಾಣಿಗಳಿವೆ. ಜೈವಿಕ ಉದ್ಯಾನಕ್ಕೆ ಪ್ರತಿ ವರ್ಷ 20 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.

ಪ್ರಾಣಿ, ಪಕ್ಷಿಗೆ ನೀರು ಸಿಂಪರಣೆ

ಬೇಸಿಗೆ ವೇಳೆ ಪ್ರಾಣಿ, ಪಕ್ಷಿಗಳು ಬಸವಳಿಯದಂತೆ ನೋಡಿಕೊಳ್ಳಲು ಜೈವಿಕ ಉದ್ಯಾನದಲ್ಲಿ ತಣ್ಣನೆಯ ವಾತಾವರಣವನ್ನು ನಿರ್ಮಿಸಲಾಗುತ್ತಿದೆ.

ಜಿರಾಫೆ, ಜೀಬ್ರಾ ಸಹಿತ ಕೆಲವು ಪ್ರಾಣಿ, ಪಕ್ಷಿಗಳ ಮನೆ ಆವರಣದಲ್ಲಿ ನೀರು ಸಿಂಪರಣಾ ಯಂತ್ರಗಳನ್ನು ಅಳವಡಿಸಿದರೆ, ಆನೆಗಳಿಗೆ ನಿತ್ಯ ಸ್ನಾನ ವ್ಯವಸ್ಥೆ ಮಾಡಲಾಗುತ್ತದೆ. ಮಂಗಗಳಿಗೆ ಐಸ್‌ ಲಾಲಿ ಪಾಪ್‌ಗಳನ್ನು ನೀಡಲಾಗುತ್ತದೆ. ಮಾರ್ಚ್‌, ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಈ ವ್ಯವಸ್ಥೆ ಇರಲಿದೆ.

ಚಿಂಪಾಂಜಿಗೂ ಅನುಮತಿ
ಮೂರು ಚಿಂಪಾಂಜಿಗಳನ್ನು ಸಿಂಗಪುರ ಮೃಗಾಲಯದಿಂದ ಬನ್ನೇರುಘಟ್ಟಕ್ಕೆ ತರಲು ಅನುಮತಿ ದೊರೆತಿದ್ದು, ಪ್ರಕ್ರಿಯೆ ಶುರುವಾಗಿದೆ. ನಾಲ್ಕು ತಿಂಗಳ ಒಳಗೆ ಅವುಗಳು ಲಭ್ಯವಾಗುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.