ADVERTISEMENT

ಕೃಷಿ ಸಚಿವರಾಗಿ ತವರು ಕ್ಷೇತ್ರಕ್ಕೆ ಬಂದ ಬಿ.ಸಿ.ಪಾಟೀಲಗೆ ಅದ್ಧೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 13:34 IST
Last Updated 14 ಫೆಬ್ರುವರಿ 2020, 13:34 IST
ಬಿ.ಸಿ.ಪಾಟೀಲ
ಬಿ.ಸಿ.ಪಾಟೀಲ   

ಹಾವೇರಿ: ‌‘ರೈತನ ಮಗನಾದ ನಾನು ಅನ್ನದಾತರ ನೋವಿಗೆ ಸ್ಪಂದಿಸಿ, ರೈತರ ಕಣ್ಣೀರೊರೆಸುವ ಕೆಲಸ ಮಾಡುತ್ತೇನೆ. ರಾಜ್ಯದಾದ್ಯಂತ ಪ್ರವಾಸ ಮಾಡಿ, ಅಹವಾಲು ಆಲಿಸಬೇಕು. ಅವರ ನಿರೀಕ್ಷೆಗೆ ತಕ್ಕ ಹಾಗೆ ಕೆಲಸ ಮಾಡುತ್ತೇನೆ’ ಎಂದು ಕೃಷಿ ಸಚಿವಬಿ.ಸಿ.ಪಾಟೀಲಹೇಳಿದರು.

ಕೃಷಿ ಸಚಿವನಾಗಿ ಪ್ರಥಮ ಬಾರಿಗೆ ತವರು ಕ್ಷೇತ್ರ ಹಿರೇಕೆರೂರಿಗೆ ಭೇಟಿ ನೀಡಿದ ಬಿ.ಸಿ.ಪಾಟೀಲ ಅವರು ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದರು. ‘ಹಿರೇಕೆರೂರು ಕ್ಷೇತ್ರಕ್ಕೆ 40 ವರ್ಷಗಳಿಂದ ‘ಮಂತ್ರಿ ಭಾಗ್ಯ‘ ಸಿಕ್ಕಿರಲಿಲ್ಲ. ಕ್ಷೇತ್ರದ ಜನರ ಬಹುದಿನದ ಕನಸು ಈಗ ನನಸಾಗಿದೆ. ನನ್ನ ತಾಲ್ಲೂಕಿಗೆ ಕೃಷಿ ಸಚಿವನಾಗಿ ಬರುತ್ತಿರುವುದಕ್ಕೆ ತುಂಬಾ ಖುಷಿ ಮತ್ತು ಹೆಮ್ಮೆಯಾಗುತ್ತಿದೆ’ ಎಂದರು.

ಕೃಷಿ ಇಲಾಖೆ ಬಹಳ ದೊಡ್ಡ ಇಲಾಖೆ. ಅದನ್ನು ಅರ್ಥಮಾಡಿಕೊಳ್ಳಬೇಕಿದೆ.‘ಕಿಸಾನ್‌ ಸಮ್ಮಾನ್‌’ ಯೋಜನೆಯಲ್ಲಿ ಬಿಟ್ಟು ಹೋಗಿರುವ ಒಂದೂವರೆ ಲಕ್ಷ ರೈತರ ಹೆಸರನ್ನು 10 ದಿನದೊಳಗಾಗಿ ಸೇರ್ಪಡೆಗೊಳಿಸಲಾಗುವುದು. ಕೃಷಿ ಸಚಿವನಾದ ಮೇಲೆ ಎರಡು ದಿನಗಳಲ್ಲಿ 40 ಸಾವಿರ ರೈತರ ಹೆಸರನ್ನು ಸೇರ್ಪಡೆ ಮಾಡಲಾಗಿದೆ’ ಎಂದರು.

ADVERTISEMENT

ರಾಜ್ಯದ ರೈತ ನಾಯಕರನ್ನು ಮುಖ್ಯಮಂತ್ರಿ ಅವರು ನಿನ್ನೆ ಕರೆಸಿ, ಅವರ ಅಹವಾಲು ಕೇಳಿ, ರೈತ ಪರ ಬಜೆಟ್‌ ಮಂಡನೆಗೆ ಚಿಂತನೆ ನಡೆಸಿದ್ದಾರೆ. ಅಧಿಕಾರಿಗಳೊಂದಿಗೆ ಸಭೆ ನಡೆಸಿ, ರೈತರ ಸಮಸ್ಯೆಗಳನ್ನು ಪರಿಹರಿಸಲು ಚಿಂತನೆ ನಡೆಸಿದ್ದೇನೆ ಎಂದರು.

ಅರಣ್ಯ ಇಲಾಖೆಯನ್ನು ಯಾರೂ ಬಿಡುವುದಿಲ್ಲ. ನಮ್ಮನ್ನು ಜನರಿರುವ ಕಡೆ ಕಳುಹಿಸಿ. ಪ್ರಾಣಿಗಳ ಇರುವ ಕಡೆ ಕಳುಹಿಸಬೇಡಿ ಎಂದು ಸಿ.ಎಂ ಅವರಲ್ಲಿ ಮನವಿ ಮಾಡಿದೆ. ಅದಕ್ಕೆ ಅವರು ಕೃಷಿ ಖಾತೆ ಕೊಟ್ಟಿದ್ದಾರೆ ಎಂದರು.

ಉಪ ಚುನಾವಣೆಯಲ್ಲಿ ಟೊಂಕ ಕಟ್ಟಿ ನಿಂತ ಯು.ಬಿ.ಬಣಕಾರ ಮತ್ತು ತಾಲ್ಲೂಕಿನ ಜನತೆಗೆ ಕೋಟಿ ನಮನಗಳನ್ನು ಸಲ್ಲಿಸುತ್ತೇನೆ. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಅಭಿಮಾನದ ನುಡಿಗಳನ್ನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.