
ಬೆಂಗಳೂರು: ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಜಾಗತಿಕ ಕೃತಕ ಬುದ್ಧಿಮತ್ತೆ (ಎಐ) ವೈಬ್ರೆನ್ಸಿ ಸೂಚ್ಯಂಕದಲ್ಲಿ ಭಾರತ ಜಾಗತಿಕವಾಗಿ ಮೂರನೇ ಸ್ಥಾನ ಪಡೆಯುವುದಕ್ಕೆ ಕರ್ನಾಟಕದ ದೊಡ್ಡ ಕೊಡುಗೆ ಇದೆ ಎಂದು ಜೈವಿಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ವರ್ಷದ ಹಿಂದೆ ಭಾರತ ನಾಲ್ಕನೇ ಸ್ಥಾನದಲ್ಲಿತ್ತು. ಈಗ ಅಮೆರಿಕ ಮತ್ತು ಚೀನಾ ಮಾತ್ರ ಭಾರತಕ್ಕಿಂತ ಮುಂದಿವೆ. ಕೃತಕ ಬುದ್ಧಿಮತ್ತೆಯಲ್ಲಿ ಕರ್ನಾಟಕವು ಸಾಕಷ್ಟು ಪ್ರಗತಿ ಸಾಧಿಸಿದೆ. ಜಾಗತಿಕ ಶ್ರೇಯಾಂಕವು ಆರ್ ಆ್ಯಂಡ್ ಡಿ, ಪ್ರತಿಭೆ, ಜವಾಬ್ದಾರಿಯುತ ಎಐ ನೀತಿ ಮತ್ತು ಮೂಲಸೌಕರ್ಯ ಸೇರಿದಂತೆ ಹಲವು ಮಾನದಂಡಗಳನ್ನು ಆಧರಿಸಿದೆ. ಭಾರತದ ಶ್ರೇಯಾಂಕದ ಏರಿಕೆಗೆ ಪ್ರಬಲವಾದ ಸಂಶೋಧನಾ ಫಲಿತಾಂಶ, ಅಧಿಕ ಪೇಟೆಂಟ್, ಬೆಳೆಯುತ್ತಿರುವ ಎಐ ಉದ್ಯೋಗ ಮಾರುಕಟ್ಟೆ ಮತ್ತು ವಿಸ್ತರಿಸುತ್ತಿರುವ ಡಿಜಿಟಲ್ ಮೂಲಸೌಕರ್ಯ ಕಾರಣ. ಹಾಗಾಗಿಯೇ, ಕರ್ನಾಟಕ ಭಾರತವನ್ನು ಎಐ ನಾಯಕನ ಸ್ಥಾನದಲ್ಲಿ ಇರಿಸಿದೆ ಎಂದಿದ್ದಾರೆ.
ಸದೃಢ ಎಐ ಮತ್ತು ಡೀಪ್ಟೆಕ್ ಲಕ್ಷ್ಯದೊಂದಿಗೆ 2025-30ರ ಕರ್ನಾಟಕ ಸ್ಟಾರ್ಟ್ಅಪ್ ನೀತಿ ರೂಪಿಸಲಾಗಿದೆ. 25,000 ಸ್ಟಾರ್ಟ್ಅಪ್ಗಳನ್ನು ಬೆಂಬಲಿಸಲು ₹518 ಕೋಟಿ ಅನುದಾನ ಒದಗಿಸಲಾಗುತ್ತಿದೆ. ಪ್ರತಿಭೆಯ ವಿಷಯದಲ್ಲಿ ಭಾರತವು ಈಗಾಗಲೇ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.