ADVERTISEMENT

ಬಿಸಿಯೂಟ ಸಿಬ್ಬಂದಿಗೆ ಏಪ್ರಿಲ್‌ನಿಂದಲೇ ವೇತನ ನೀಡಿ: ಅಕ್ಷರ ದಾಸೋಹ ನೌಕರರ ಸಂಘ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 10:56 IST
Last Updated 30 ಆಗಸ್ಟ್ 2021, 10:56 IST
   ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಸದಸ್ಯರು ಕಳೆದ ವರ್ಷ ಪ್ರತಿಭಟನೆ ನಡೆಸಿದ್ದ ಸಂದರ್ಭ–ಸಂಗ್ರಹ ಚಿತ್ರ
ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಸದಸ್ಯರು ಕಳೆದ ವರ್ಷ ಪ್ರತಿಭಟನೆ ನಡೆಸಿದ್ದ ಸಂದರ್ಭ–ಸಂಗ್ರಹ ಚಿತ್ರ   

ಬೆಂಗಳೂರು: ‘ಕೋವಿಡ್‌ನಿಂದಾಗಿ ಬಿಸಿಯೂಟ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಏಪ್ರಿಲ್‌ನಿಂದಲೇ ವೇತನ ಬಿಡುಗಡೆ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಸಂಘದ ಗೌರವ ಅಧ್ಯಕ್ಷೆ ಎಸ್‌.ವರಲಕ್ಷ್ಮಿ‘ಕೇಂದ್ರ ಸರ್ಕಾರವು ಬಿಸಿಯೂಟ ಸಿಬ್ಬಂದಿಗೆ ಕಳೆದ 10 ವರ್ಷಗಳಿಂದ ವೇತನ ಹೆಚ್ಚಿಸಿಲ್ಲ. ಕೋವಿಡ್‌ ಸಮಯದಲ್ಲಿ ರಾಜ್ಯ ಸರ್ಕಾರವು ಪ್ರಕಟಿಸಿದ ಆರ್ಥಿಕ ಪ್ಯಾಕೇಜ್‌ಗಳಿಂದಲೂ ನಮ್ಮನ್ನು ಹೊರಗಿಡಲಾಗಿದೆ. ಪ್ರತಿವರ್ಷ ನಮಗೆ ಜೂನ್‌ನಿಂದ ವೇತನ ನೀಡಬೇಕು. ಈಗ ಮೂರು ತಿಂಗಳಾದರೂ ಸಂಬಳ ಕೈಸೇರಿಲ್ಲ. ಬಾಕಿ ಉಳಿಸಿಕೊಂಡಿರುವ ಈ ಮೊತ್ತದ ಜೊತೆಗೆ ಏಪ್ರಿಲ್‌ ಮತ್ತು ಮೇ ತಿಂಗಳ ವೇತನವನ್ನೂ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

‘ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ಬಿಸಿಯೂಟ ಯೋಜನೆಯನ್ನು ಬಲಪಡಿಸುವುದರ ಜೊತೆಗೆ ಈಗಿರುವ ಮಾದರಿಯನ್ನೇ ಮುಂದುವರಿಸಬೇಕು. ವಯಸ್ಸಿನ ನೆಪವೊಡ್ಡಿ ಯಾವುದೇ ಕಾರಣಕ್ಕೂ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಬಾರದು. ಪ್ರತಿ ಶಾಲೆಯಲ್ಲಿ ಕನಿಷ್ಠ ಇಬ್ಬರು ಅಡುಗೆ ಸಿಬ್ಬಂದಿಯನ್ನು ನೇಮಿಸಬೇಕು. ನಿಗದಿತ 4 ಗಂಟೆಗಳಿಗಿಂತಲೂ ಹೆಚ್ಚು ಸಮಯ ಕೆಲಸ ಮಾಡುತ್ತಿದ್ದೇವೆ. ಹೀಗಾಗಿ ಅಕ್ಷರ ದಾಸೋಹ ಕೈಪಿಡಿಯಲ್ಲಿ ನಮ್ಮ ಕೆಲಸದ ಅವಧಿಯನ್ನು 4 ಗಂಟೆಯ ಬದಲಾಗಿ 6 ಗಂಟೆ ಎಂದು ನಮೂದಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಕೇಂದ್ರೀಕೃತ ಅಡುಗೆ ಕೇಂದ್ರ ಮಾದರಿಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು. ಖಾಸಗಿ ಸಂಸ್ಥೆಗಳಿಗೆ ಬಿಸಿಯೂಟದ ಹೊಣೆನೀಡಬಾರದು. ಕೆಲಸದ ಅವಧಿಯ ನಂತರ ಬಿಸಿಯೂಟ ಸಿಬ್ಬಂದಿಯನ್ನು ಶಾಲಾ ಕೈತೋಟದ ಕೆಲಸಕ್ಕೆ ನಿಯೋಜಿಸಬೇಕು. ಅದಕ್ಕೆ ನರೇಗಾ ಯೋಜನೆಯ ಅಡಿಯಲ್ಲಿ ಪ್ರತ್ಯೇಕ ವೇತನ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ಸಂಘದ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತ, ಉಪಾಧ್ಯಕ್ಷೆ ಬಿ.ಎಂ.ಶಿಲ್ಪಾ, ಸದಸ್ಯರಾದ ಕೆ.ಮಂಜುಳಾ ಹಾಗೂರಾಜಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.