ಹುಬ್ಬಳ್ಳಿ: ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸಹಜವಾಗಿ ನಡೆಯುತ್ತದೆ. ಅದರಲ್ಲಿ ವಿಶೇಷವೇನೂ ಇಲ್ಲ. ಆದರೆ, ಈ ಬಾರಿಯ ಮೈತ್ರಿ ಗಟ್ಟಿಯಾಗಿರುತ್ತೆ. ಯಾಕೆಂದರೆ, ಮೈತ್ರಿ ಮುರಿದರೆ ಏನಾಗುತ್ತದೆ ಎಂದು ಬಿಜೆಪಿಗೆ ಅರಿವಾಗಿದೆ' ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಮೈತ್ರಿ ಉತ್ತಮವಾಗಿರುತ್ತದೆ. ಎಚ್.ಡಿ. ದೇವೇಗೌಡರ ಆಲೋಚನೆಗಳು ಈಗಿನ ರಾಜಕೀಯದಲ್ಲಿ ನಡೆಯುವುದಿಲ್ಲ. ಅವರ ರಾಜಕಾರಣವೇ ಬೇರೆ. ಅವರು ಹೇಳುವುದನ್ನು ಹೇಳುತ್ತಾರೆ. ಕೇಳುವುದು, ಬಿಡುವುದು ನಮ್ಮ ನಿರ್ಧಾರ. ನಿಮ್ಮಷ್ಟಕ್ಕೆ ನೀವಿರಿ ಎಂದು ಅವರಿಗೆ ನಾವೆಲ್ಲ ಈಗಾಗಲೇ ಹೇಳಿದ್ದೇವೆ' ಎಂದು ತಿಳಿಸಿದರು.
'ಕಾಂಗ್ರೆಸ್'ನವರೇ ನಮ್ಮನ್ನು ಸೋಲಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅಂದರೆ, ಅವರ ಸೋಲಿನಲ್ಲಿ ಜೆಡಿಎಸ್ ಪಾತ್ರವಿಲ್ಲ ಎನ್ನುವುದು ಸ್ಪಷ್ಟವಾಯಿತು' ಎಂದರು.
'ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ ನಮ್ಮ ಮನೆಗೆ ಭೇಟಿ ನೀಡುತ್ತ ಇರುತ್ತಾರೆ. ಇದರ ಬಗ್ಗೆ ಅನ್ಯತಾ ಕಲ್ಪಿಸುವುದು ಬೇಡ. ಅವರು ಬಿಜೆಪಿ ಸೇರಲ್ಲ. ಅದು ಉಹಾಪೋಹ. ಜನತಾದಳದಲ್ಲಿ ಅವರು ಮೊದಲಿನಿಂದ ಇದ್ದವರಾಗಿದ್ದು, ಅಲ್ಲಿಗೆ ಹೋಗಬಹುದು' ಎಂದು ಹೊರಟ್ಟಿ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.