ADVERTISEMENT

ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಗಲಾಟೆ ಪ್ರಕರಣ: ಗಣೇಶ್ ವಿರುದ್ಧ ಚಾರ್ಜ್‌ಶೀಟ್

ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಶಾಸಕರಿಬ್ಬರ ಗಲಾಟೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 20:00 IST
Last Updated 14 ಡಿಸೆಂಬರ್ 2019, 20:00 IST
ಶಾಸಕ ಗಣೇಶ್‌ ಮತ್ತು ಶಾಸಕ ಆನಂದ್ ಸಿಂಗ್‌
ಶಾಸಕ ಗಣೇಶ್‌ ಮತ್ತು ಶಾಸಕ ಆನಂದ್ ಸಿಂಗ್‌   

ರಾಮನಗರ: ಬಿಡದಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಶಾಸಕರಾದ ಜೆ.ಎನ್‌. ಗಣೇಶ್‌ (ಕಂಪ್ಲಿ) ಹಾಗೂ ಆನಂದ ಸಿಂಗ್ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಬಿಡದಿ ಪೊಲೀಸರು ಆರೋಪಿ ಗಣೇಶ್ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಇದೇ 9ರಂದು ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

ಬಿಡದಿಠಾಣೆಯ ಹಿಂದಿನ ಸಬ್‌ ಇನ್‌ಸ್ಪೆಕ್ಟರ್‌ ಹರೀಶ್‌ ಹಾಗೂ ಮಹಾಲಿಂಗೇಗೌಡ ನೇತೃತ್ವದ ತಂಡವು ತನಿಖೆ ಕೈಗೊಂಡು ಈ ಜಾರ್ಜ್‌ಶೀಟ್‌ ಸಿದ್ಧಪಡಿಸಿತ್ತು. ಸುಮಾರು 30 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ ಆಗಿದೆ.

ಕೆಲವು ಶಾಸಕರೂ ಸೇರಿದಂತೆ 12 ಸಾಕ್ಷಿಗಳನ್ನು ತನಿಖಾಧಿಕಾರಿಗಳು ಉಲ್ಲೇಖಿಸಿದ್ದಾರೆ. ಗಲಾಟೆ ಸಂದರ್ಭ ಅಲ್ಲಿದ್ದ ಜನಪ್ರತಿನಿಧಿಗಳು ಹಾಗೂ ಹೋಟೆಲ್‌ ಸಿಬ್ಬಂದಿಯ ಹೇಳಿಕೆಗಳು, ಹೋಟೆಲ್‌ನ ಸಿ.ಸಿ.ಟಿ.ವಿ ದೃಶ್ಯಾವಳಿಗಳನ್ನು ಸಾಕ್ಷ್ಯವಾಗಿ ನೀಡಲಾಗಿದೆ. ಆನಂದ್ ಸಿಂಗ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ನೀಡಿದ ಹೇಳಿಕೆ ಜೊತೆಗೆ ಆರೋಪಿ ಗಣೇಶ್ ಘಟನೆ ಕುರಿತು ನೀಡಿದ ವಿವರಗಳು ಚಾರ್ಜ್‌ಶೀಟ್‌ನಲ್ಲಿ ಇವೆ.

ADVERTISEMENT

ಈ ಬಗ್ಗೆ ಪ್ರತಿಕ್ರಿಯೆ ನೀಡಲು ರಾಮನಗರ ಎಸ್ಪಿ ಅನೂಪ್‌ ಶೆಟ್ಟಿ ನಿರಾಕರಿಸಿದರು. ರಾಮನಗರದ ಸಿಜೆಎಂ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದು, ನವೆಂಬರ್‌ 14ರಂದು ಈ ಪ್ರಕರಣವು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ರ್ಗಾವಣೆಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.