ADVERTISEMENT

ಉಪವಾಸಕ್ಕೆ ಹೆದರಿ ಬ್ರಿಟಿಷರು ಓಡಿಹೋಗಿದ್ದಲ್ಲ: ಸಂಸದ ಅನಂತಕುಮಾರ ಹೆಗಡೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 11:02 IST
Last Updated 1 ಫೆಬ್ರುವರಿ 2020, 11:02 IST
 ಅನಂತಕುಮಾರ ಹೆಗಡೆ
ಅನಂತಕುಮಾರ ಹೆಗಡೆ   

ಬೆಂಗಳೂರು: ‘ಇತಿಹಾಸದ ಪ್ರಕಾರ ಉಪವಾಸಕ್ಕೆ ಬ್ರಿಟಿಷರು ಹೆದರಿ, ಸ್ವಾತಂತ್ರ್ಯ ಕೊಟ್ಟು ಓಡಿ ಹೋದರು. ಇದನ್ನು ಕೇಳಿದರೆ ತಣ್ಣಗಿರುವ ರಕ್ತ ಹೆಪ್ಪುಗಟ್ಟಿ ಹೋಗುತ್ತದೆ’ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.

‘ರಾಷ್ಟ್ರೀಯ ವಿಚಾರವನ್ನು ಒಪ್ಪಿಕೊಳ್ಳುವವರನ್ನು ಬ್ರಿಟಿಷರು ವಿರೋಧ ಮಾಡಿದರು. ಈ ದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಮೂರು ವಿಧವಿದೆ. ಚಂದ್ರಶೇಖರ ಆಜಾದ್, ಭಗತ್ ಸಿಂಗ್‌ ಅಂತಹಕ್ರಾಂತಿಕಾರಿಗಳು ಶಸ್ತ್ರಸಜ್ಜಿತರಾಗಿ ಹೋರಾಟ ಮಾಡಿದರು. ಇನ್ನೊಂದು ವರ್ಗ ಅತ್ಯಂತ ಪ್ರಖರ ರಾಷ್ಟ್ರೀಯ ವಿಚಾರಗಳೊಂದಿಗೆ ಶಿವಾಜಿ, ಹುಕ್ಕ–ಬುಕ್ಕರಂತಹನೂರಾರು ಮಂದಿಯನ್ನು ಮುಂದೆ ತಂದರು’ ಎಂದರು.

‘ಇನ್ನೊಂದು ರೀತಿಯ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ಬಳಿಯೇ ಹೇಗೆ ಹೋರಾಟ ಮಾಡಬೇಕು ಎಂದು ಕೇಳಿ, ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡರು. ಒಳಗಡೆ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಮನವಿ ಮಾಡಿಕೊಂಡರು. ಪರಿಣಾಮ ಲಾಠಿ ನೋಡದ, ಏಟು ತಿನ್ನದವರನ್ನು ಇತಿಹಾಸದ ಪುಟಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಎಂದು ಬಿಂಬಿಸಲಾಯಿತು’ ಎಂದು ವ್ಯಂಗ್ಯವಾಡಿದರು.

ADVERTISEMENT

‘ನಮ್ಮಲ್ಲಿ ಮಾತ್ರ ಶಸ್ತ್ರ ಮಾತ್ತು ಶಾಸ್ತ್ರ ಒಟ್ಟಾಗಿ ಸಾಗಿದೆ. ಬುದ್ಧಿಯಿಲ್ಲದೆ ಶಸ್ತ್ರವನ್ನು ಕೈಯಲ್ಲಿ ಹಿಡಿದಿರಲಿಲ್ಲ. ಶಸ್ತ್ರವನ್ನು ಕೆಳಗಿಟ್ಟು, ಕೇವಲ ಶಾಸ್ತ್ರದಿಂದ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸುವ ಸೋಗಲಾಡಿತನದ ಸಿದ್ಧಾಂತವನ್ನೂ ನಾವು ಒಪ್ಪಿಕೊಂಡಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.