ADVERTISEMENT

ಅಂಗನವಾಡಿಗಳಲ್ಲಿ ಕಳಪೆ ಗುಣಮಟ್ಟದ ಆಹಾರ

ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಮಿತಿ ಕಳವಳ

ಜಯಸಿಂಹ ಆರ್.
Published 24 ಆಗಸ್ಟ್ 2025, 21:27 IST
Last Updated 24 ಆಗಸ್ಟ್ 2025, 21:27 IST
ರಾಜ್ಯದ ಅಂಗನವಾಡಿ ಕೇಂದ್ರವೊಂದಕ್ಕೆ ಪೂರೈಸಲಾಗಿದ್ದ ಕೊಳೆತ ಬೆಲ್ಲದ ಪುಡಿ ಮತ್ತು ಸಾಂಬಾರು ಪುಡಿ –ಪ್ರಜಾವಾಣಿ ಚಿತ್ರ
ರಾಜ್ಯದ ಅಂಗನವಾಡಿ ಕೇಂದ್ರವೊಂದಕ್ಕೆ ಪೂರೈಸಲಾಗಿದ್ದ ಕೊಳೆತ ಬೆಲ್ಲದ ಪುಡಿ ಮತ್ತು ಸಾಂಬಾರು ಪುಡಿ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಅಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುತ್ತಿರುವ ಪೌಷ್ಟಿಕ ಆಹಾರದ ಗುಣಮಟ್ಟ ಕಳಪೆಯಾಗಿದೆ ಎಂದು ಕರ್ನಾಟಕ ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಮಿತಿಯು ಹೇಳಿದೆ.

ಈಚೆಗೆ ನಡೆದ ಕರ್ನಾಟಕ ವಿಧಾನಮಂಡಲ ಅಧಿವೇಶನದಲ್ಲಿ, ಆಗಸ್ಟ್‌ 22ರಂದು 2024–25ನೇ ಸಾಲಿಗೆ ಸಂಬಂಧಿಸಿದ ವರದಿಯನ್ನು ಮಂಡಿಸಲಾಗಿದೆ. ಸಮಿತಿಯ ಸದಸ್ಯರು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದಾಗ, ಕಳಪೆ ಗುಣಮಟ್ಟದ ಆಹಾರ ನೀಡಿರುವುದು ಗಮನಕ್ಕೆ ಬಂದಿತು ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಈ ಹಿಂದೆ ಅಂಗನವಾಡಿಗಳಿಗೆ ಉತ್ತಮ ಗುಣಮಟ್ಟದ ಆಹಾರ ಪೂರೈಸಲಾಗುತ್ತಿತ್ತು. ಈಗ ಪೌಡರ್‌ ರೂಪದಲ್ಲಿ ಆಹಾರ ನೀಡಲಾಗುತ್ತಿದ್ದು, ಅದರಲ್ಲಿ ಪೌಷ್ಟಿಕಾಂಶ ಇದೆಯೋ ಅಥವಾ ಇಲ್ಲವೋ ಎಂಬುದು ತಿಳಿಯುವುದಿಲ್ಲ. ಔಷಧ ರೂಪದಲ್ಲೂ ಆಹಾರ ನೀಡುತ್ತಿದ್ದು, ಇದು ಸರಿಯಲ್ಲ. ಈ ಹಿಂದೆ ಯಾವ ಸ್ವರೂಪದಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸಲಾಗುತ್ತಿತ್ತೋ, ಅದೇ ಪದ್ಧತಿಯನ್ನು ಅನುಸರಿಸಬೇಕು’ ಎಂದು ಸಮಿತಿಯು ಶಿಫಾರಸು ಮಾಡಿದೆ.

ADVERTISEMENT

‘ರಾಜ್ಯದ ಎಲ್ಲ ಅಂಗನವಾಡಿಗಳಿಗೆ ಆಹಾರ ಪೂರೈಕೆ ಮಾಡಲು ಕೆಲವು ಏಜೆನ್ಸಿಗಳಿಗೆ ಗುತ್ತಿಗೆ ನೀಡಲಾಗಿದೆ. ಈ ಬಗ್ಗೆ ದೂರುಗಳಿವೆ. ಮಾಧ್ಯಮಗಳಲ್ಲೂ ವರದಿಯಾಗಿವೆ. ದೂರುಗಳು ಬಂದಾಗ ತಾವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ವಿವರಣೆ ನೀಡಿದ್ದಾರೆ. ಆದರೆ ಅದು ಸಾಲುವುದಿಲ್ಲ’ ಎಂದು ಸಮಿತಿಯು ಅಭಿಪ್ರಾಯಪಟ್ಟಿದೆ.

‘ದೂರು ಬಂದ ಕೂಡಲೇ ಅಂತಹ ಏಜೆನ್ಸಿ, ಗೋದಾಮು ಮತ್ತು ಸಂಬಂಧಿತ ಅಂಗನವಾಡಿಗಳಿಗೆ ಭೇಟಿ ನೀಡಿದರೆ ಕಳಪೆ ಗುಣಮಟ್ಟದ ಯಾವ ಸರಕೂ ಸಿಗುವುದಿಲ್ಲ. ಬದಲಿಗೆ ದಿಢೀರ್‌ ಭೇಟಿ ನೀಡಬೇಕು. ಆಗ ಮಾತ್ರ ಲೋಪಗಳನ್ನು ಪತ್ತೆ ಮಾಡಲು ಸಾಧ್ಯ ಎಂದು ಇಲಾಖೆಯ ನಿರ್ದೇಶಕರಿಗೆ ಸೂಚಿಸಲಾಗಿದೆ’ ಎಂದು ಸಮಿತಿಯ ವರದಿ ತಿಳಿಸಿದೆ.

ಗುತ್ತಿಗೆ ರದ್ದುಪಡಿಸಲು ಶಿಫಾರಸು

ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನಾ ಕೇಂದ್ರಗಳಿಂದ (ಎಂಎಸ್‌ಪಿಸಿ) ಗುತ್ತಿಗೆದಾರರ ಮೂಲಕ ಅಂಗನವಾಡಿ ಕೇಂದ್ರಗಳಿಗೆ ಮಾಡುತ್ತಿರುವ ಆಹಾರದ ಗುಣಮಟ್ಟ ಕಳಪೆಯಾಗಿರುವ ಕಾರಣ ಈ ಗುತ್ತಿಗೆಗಳನ್ನು ರದ್ದುಪಡಿಸಿ ಎಂದು ಸಮಿತಿಯು ಶಿಫಾರಸು ಮಾಡಿದೆ.  ಎಂಎಸ್‌‍ಪಿಸಿ ಕೇಂದ್ರಗಳಿಂದ ಪೂರೈಸಲಾಗುತ್ತಿರುವ ಆಹಾರದ ಬದಲಿಗೆ ಮಾಲ್ಟ್‌ ಮತ್ತು ಹಾಲನ್ನು ಒದಗಿಸಿ. ಸ್ಥಳೀಯ ಮಟ್ಟದಲ್ಲಿಯೇ ಪೌಷ್ಟಿಕ ಆಹಾರ ಒದಗಿಸಬೇಕು. ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಬೆಳೆಯಲು ಅನುಕೂಲವಾಗುವಂತಹ ಆಹಾರ ಹಾಗೂ ವಾತಾವರಣವನ್ನು ಅಂಗನವಾಡಿ ಕೇಂದ್ರಗಳಲ್ಲಿ ಒದಗಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಅಂಗನವಾಡಿ ಕೇಂದ್ರಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಸಿರುವುದರ ವಿರುದ್ಧ ಇಲಾಖೆಯ ಸಿಬ್ಬಂದಿ ಕಾರ್ಯದರ್ಶಿಗೆ ಪತ್ರ ಬರೆದ ಸಂಬಂಧ ಜೂನ್‌ 3 ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.