ಧಾರವಾಡ: ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ, ನಾಟಕಕಾರ, ನಿರೂಪಕ, ನಟ ಹಾಗೂ ರಂಗ ನಿರ್ದೇಶಕ ಅನೀಲ ದೇಸಾಯಿ(57) ಸೋಮವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು.
ಭಾನುವಾರ ತಡರಾತ್ರಿ ವರೆಗೆ ಅತ್ಯಂತ ಚಟುವಟಿಕೆಯಿಂದಲೇ ಕೆಲಸ ಮಾಡಿದ್ದ ಅನೀಲ ದೇಸಾಯಿ ಅವರು ಸೋಮವಾರ ಮುಂಜಾನೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಮೃತರಿಗೆ ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವಿದೆ.
ಧಾರವಾಡ ಆಕಾಶವಾಣಿಯಲ್ಲಿ ಸೇವೆ ಪ್ರಾರಂಭಿಸಿದ ಅನೀಲ ದೇಸಾಯಿ ಅವರು, ಕಳೆದ ಕೆಲ ವರ್ಷಗಳ ಹಿಂದೆ ಬಳ್ಳಾರಿಯ ಆಕಾಶವಾಣಿ ಕೇಂದ್ರಕ್ಕೆ ವರ್ಗಾವಣೆಗೊಂಡು ಅಲ್ಲಿಯೂ ಅತ್ಯಂತ ಯಶಸ್ವಿಯಿಂದ ಕೆಲಸ ನಿರ್ವಹಿಸುತ್ತ ಜನರ ಮನಸ್ಸು ಗೆದ್ದಿದ್ದರು. ನಗರ ಮಾತ್ರವಲ್ಲದೇ ವಿವಿಧೆಡೆ ನಡೆಯುವ ಸಂಗೀತ ಕಾರ್ಯಕ್ರಮ, ನಾಟಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ ಕಾರ್ಯ ನಿರ್ವಹಿಸುತ್ತ ಎಲ್ಲರ ಮನದಲ್ಲಿದ್ದರು. ಅಷ್ಟೇ ಅಲ್ಲದೇ ಧಾರವಾಡ ಸಾಹಿತ್ಯ ಸಂಭ್ರಮದಲ್ಲಿಯೂ ಸಹ ನಿರಂತರವಾಗಿ ಒಂದಿಲ್ಲೊಂದಿ ಘೋಷ್ಠಿಯನ್ನು ನಿರ್ದೇಶಿಸುತ್ತಲೇ ಬರುತ್ತಿದ್ದರು.
ಜಾನಪದ ಕಲೆಯನ್ನು ಅತ್ಯಂತ ಪ್ರೀತಿಸುತ್ತಿದ್ದ ಇವರು ಜಾನಪದ ಕಲಾವಿದರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ನಿರಂತರ ಶ್ರಮಿಸುತ್ತಿದ್ದರು. ಅಲ್ಲದೇ ಸಾಹಿತ್ಯ ದಿಗ್ಗಜರನ್ನು ಅತ್ಯಂತ ಹತ್ತಿರದಿಂದ ಕಂಡಿದ್ದ ಅನೀಲ ದೇಸಾಯಿ ಅವರು, ಸಾಹಿತ್ಯ ಕ್ಷೇತ್ರದಲ್ಲಿಯೂ ಕೃಷಿ ಮಾಡುತ್ತಲೇ ಇದ್ದರು.
ಅನೀಲ ದೇಸಾಯಿ ಅವರ ಅಗಲಿಕೆಯಿಂದ ಧಾರವಾಡ ಸಾಹಿತ್ಯ, ಸಾಂಸ್ಕೃತಿಕ ಮತ್ತು ಕಲೆ ಎಲ್ಲ ರಂಗದ ಕೊಂಡಿ ಕಳಚಿದಂತಾಗಿದ್ದು, ಇಡೀ ಧಾರವಾಡವೇ ಕಂಬನಿ ಮಿಡಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.