ಬೆಂಗಳೂರು: ಕಳೆದ ವಾರ ಡಿಸೆಂಬರ್ 12 ರ ಬೆಳಗ್ಗೆ, ವಿಸ್ಟ್ರಾನ್ ಕಂಪನಿಯ ಕೋಲಾರ ಘಟಕವೂ ಅಕ್ಷರಶಃ ರಣರಂಗವಾಗಿತ್ತು. ಹಲವಾರು ಗುತ್ತಿಗೆ ನೌಕರರು ಕಂಪನಿಯ ಆವರಣಕ್ಕೆ ನುಗ್ಗಿ ದಾಂಧಲೆ ನಡೆಸಿ ಕಾರ್ಖಾನೆ ಉಪಕರಣಗಳನ್ನು ದರೋಡೆ ಮಾಡಿ ಹಿರಿಯ ಅಧಿಕಾರಿಗಳ ಕಾರುಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು.
ಈ ಕುರಿತಂತೆ, ಕರ್ನಾಟಕ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ವಿಸ್ಟ್ರಾನ್ ಮತ್ತು ಅದರ ಉದ್ಯೋಗಿಗಳ ನೇಮಕ ಸಂಸ್ಥೆಗಳಿಂದ ಹಲವು ಲೋಪಗಳು ಕಂಡುಬಂದಿವೆ. ವಿಳಂಬವಾದ ವೇತನ ಪಾವತಿ ಸಮಸ್ಯೆ ಮತ್ತು ದೋಷಯುಕ್ತ ಕೆಲಸದ ಲಾಗಿಂಗ್ ವ್ಯವಸ್ಥೆಗೆ ಸಂಬಂಧಿಸಿದ ವ್ಯತ್ಯಾಸಗಳನ್ನು ಸರಿಪಡಿಸುವಲ್ಲಿ ಕಂಪನಿಯು ವಿಫಲವಾಗಿದೆ ಎಂಬುದು ಕಂಡುಬಂದಿದೆ.
ಹಲವು ನೌಕರರು ನಿಗದಿತ 8-ಗಂಟೆಗಳ ಶಿಫ್ಟ್ಗಳ ಬದಲಿಗೆ ಸುಮಾರು 12 ಗಂಟೆಗಳ ಕಾಲ ಕೆಲಸ ಮಾಡಿದರೂ ಉದ್ಯೋಗಿಗಳಿಗೆ ಕಡಿಮೆ ಸಂಬಳ ನೀಡಲಾಯಿತು. ಅಧಿಕಾವಧಿ ಕೆಲಸ ಮಾಡಿದ್ದಕ್ಕಾಗಿ ಎಂದಿಗೂ ಅಧಿಕ ವೇತನ ಪಾವತಿಯಾಗಿರಲಿಲ್ಲ. ಈಗ, ತೈವಾನೀಸ್ ಕಂಪನಿಯ ಕ್ಲೈಂಟ್ ಆಗಿರುವ ಆಪಲ್ ಸಂಸ್ಥೆ ವಿಸ್ಟ್ರಾನ್ ಕಂಪನಿಯನ್ನು ಪರೀಕ್ಷಾ ಅವಧಿಗೆ ಒಳಪಡಿಸಿರುವುದಾಗಿ ಘೋಷಿಸಿದೆ. ಈ ಸಮಸ್ಯೆಗಳನ್ನು ಸರಿಪಡಿಸುವ ಕ್ರಮಗಳನ್ನು ಪೂರ್ಣಗೊಳಿಸುವವರೆಗೂ ಅವರು ಆಪಲ್ನಿಂದ ಯಾವುದೇ ಹೊಸ ಬ್ಯುಸಿನೆಸ್ ಸ್ವೀಕರಿಸುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಆಪಲ್ ಸಂಸ್ಥೆ ಬಿಡುಗಡೆ ಮಾಡಿರುವ ಹೇಳಿಕೆ ಇಲ್ಲಿದೆ.
ಇವತ್ತು ಬೆಳಗ್ಗೆ ವಿಸ್ಟ್ರಾನ್ ಸಹ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ನೌಕರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಾಳು ವಿಫಲರಾಗಿದ್ದಾರೆ. ಹೀಗಾಗಿ, ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಿದ್ದೇವೆ. ಭಾರತದಲ್ಲಿ ವಿಸ್ಟ್ರಾನ್ ವ್ಯವಹಾರ ನೋಡಿಕೊಳ್ಳುತ್ತಿದ್ದ ಉಪಾಧ್ಯಕ್ಷನನ್ನು ಕಿತ್ತು ಹಾಕಿರುವುದಾಗಿ ತಿಳಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.