ವಿಧಾನ ಪರಿಷತ್: 53,977 ಹೆಕ್ಟೇರ್ ಅಡಿಕೆ ತೋಟಗಳಲ್ಲಿ ಎಲೆಚುಕ್ಕಿ ರೋಗ ವ್ಯಾಪಿಸಿದೆ. ಔಷಧ ಸಿಂಪಡಣೆಯಿಂದ ಹಲವು ರೈತರು ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂದು ಬಿಜೆಪಿಯ ಎಸ್.ರುದ್ರೇಗೌಡ ಹೇಳಿದರು.
ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಪೂರಕ ಔಷಧ ಕಂಡುಹಿಡಿಯದ ಕಾರಣ ತಜ್ಞರು ಸಲಹೆ ನೀಡುವ ಎಲ್ಲ ಔಷಧಗಳನ್ನು ಸಿಂಪಡಿಸಲಾಗುತ್ತಿದೆ. ಇದರಿಂದ ರೈತರೇ ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ. ರೋಗ ಹತೋಟಿಗೆ ಹೆಚ್ಚಿನ ಸಂಶೋಧನೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅವರ ಪ್ರಶ್ನೆಗಳಿಗೆ ತೋಟಗಾರಿಕಾ ಸಚಿವರ ಪರವಾಗಿ ಉತ್ತರ ನೀಡಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ‘ರೋಗ ವ್ಯಾಪಿಸಿದ ತೋಟಗಳ ರೈತರಿಗೆ ₹6 ಸಾವಿರ ಮೌಲ್ಯದ ಔಷಧ ವಿತರಿಸಲಾಗುತ್ತಿದೆ. ಪ್ರತಿ ಹೆಕ್ಟೇರ್ಗೆ 1,200 ಸಹಾಯಧನ ನೀಡುತ್ತಿದ್ದೇವೆ. ಸಂಶೋಧನೆಗಾಗಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ₹43.61 ಲಕ್ಷ ನೀಡಲಾಗಿದೆ. ಹಾನಿ ನಿಯಂತ್ರಣಕ್ಕೆ ₹21.50 ಕೋಟಿ ಹೆಚ್ಚುವರಿ ಅನುದಾನ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ವಿವರ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.