ಬಳ್ಳಾರಿ: ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರಲ್ಲ.. ಯಾರೂ ಶಾಶ್ವತ ಶತ್ರುಗಳಲ್ಲ ಎಂಬ ಮಾತಿದೆ. ಹಾಗೆಯೇ ರಾಜಕೀಯವೇ ಬೇರೆ ವೈಯಕ್ತಿಕ ಸಂಬಂಧಗಳ ಆತ್ಮೀಯತೆಯೇ ಬೇರೆ ಎಂಬುದೂ ಕೂಡಾ ಸತ್ಯ.
ಇದಕ್ಕೆ ನಿದರ್ಶನವೆಂಬಂತೆ, ಕಾಂಗ್ರೆಸ್ನ ಮಾಜಿ ಸಚಿವ ಸಂತೋಷ ಲಾಡ್ ಹಾಗೂ ಸಚಿವ ಶ್ರೀರಾಮುಲು ಅವರ ಪರಸ್ಪರ ಪ್ರೀತಿ ಆಲಿಂಗನದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಒಬ್ಬರು ಬಿಜೆಪಿ ಪ್ರಮುಖ ಸಚಿವರು ಮತ್ತೊಬ್ಬರು ಕಾಂಗ್ರೆಸ್ ಪ್ರಮುಖ ನಾಯಕರು ತಮ್ಮ ರಾಜಕೀಯ ನೆಲೆಯನ್ನ ಮೀರಿಯೂ ಸ್ನೇಹ ಸಂಬಂಧವನ್ನು ಕಾಯ್ದುಕೊಂಡಿದ್ದಾರೆ.
ಶ್ರೀರಾಮುಲು ಮತ್ತು ಸಂತೋಷ ಲಾಡ್ ರಾಜಕೀಯ ಬದ್ಧ ವೈರಿಗಳಾದರೂ ಕೂಡಾ ಬಹಳ ದಿನಗಳ ನಂತರ ಭೇಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಪರಸ್ಪರ ಆಲಂಗಿಸಿಕೊಂಡು ಸುತ್ತ ನೆರೆದವರಿಗೆ ಅಚ್ಚರಿ ಮೂಡಿಸಿದ್ದಾರೆ. ಸಂಡೂರು ತಾಲೂಕಿನ ಬನ್ನಿಹಟ್ಟಿ ಗ್ರಾಮದ ಉಡುಸುಲಮ್ಮ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಉಭಯ ನಾಯಕರು ತಮ್ಮ ನಡುವಿನ ಆತ್ಮೀಯತೆಯನ್ನು ಪ್ರದರ್ಶಿಸಿದರು. ಪರಸ್ಪರ ಎದುರಾದಾಗ ಆತ್ಮೀಯತೆಯಿಂದ ಆಲಂಗಿಸಿಕೊಂಡು ಹರ್ಷ ವ್ಯಕ್ತಪಡಿಸುತ್ತಾ ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ.
ಇವರ ಬಹಿರಂಗ ಆಲಿಂಗನ, ಪ್ರೀತಿ ಆತ್ಮೀಯತೆಯು ಎರಡು ಪಕ್ಷದ ಕಾರ್ಯಕರ್ತರನ್ನು ಗಲಿಬಿಲಿಗೆ ದೂಡಿದೆ ಎನ್ನಬಹುದು.
ಸಂಡೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿರೋ ಸಚಿವ ಶ್ರೀರಾಮುಲು ಸಂಡೂರು ಕ್ಷೇತ್ರದಲ್ಲಿ ಸತತವಾಗಿ ಓಡಾಡುತ್ತಿದ್ದಾರೆ. ಇನ್ನೂ ಕಲಘಟಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ಗಾಗಿ ಸಂತೋಷ ಲಾಡ್ ಪ್ರಯತ್ನಗಳನ್ನು ನಡೆಸಿದ್ದಾರೆ.
ಈ ರಾಜಕೀಯ ಬದ್ಧ ವಿರೋಧಿಗಳು ಈ ರೀತಿಯಲ್ಲಿ ಬಹಿರಂಗವಾಗಿ ಆಲಿಂಗನ ಮಾಡಿಕೊಂಡಿರೋವ ಘಟನೆ ರಾಜಕೀಯ ಚರ್ಚೆಗೂ ಕಾರಣವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.