ಬೆಂಗಳೂರು: ಅನರ್ಹಗೊಂಡಿರುವ ಶಿವಾಜಿ ನಗರದ ಶಾಸಕ ರೋಷನ್ ಬೇಗ್ ಪುನಃ ಎಸ್ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗದೆ ಕೈಕೊಟ್ಟಿದ್ದಾರೆ.
ಅನಾರೋಗ್ಯದ ಕಾರಣ ಹೇಳಿ ರೋಷನ್ ಬೇಗ್ ವಿಚಾರಣೆಗೆ ಗೈರಾಗಿದ್ದಾರೆ. ವಂಚನೆ ಆರೋಪದ ಮೇಲೆ ಬಂಧಿತನಾಗಿರುವ ಐಎಂಎ ವ್ಯವಸ್ಥಾಪಕ ನಿರ್ದೇಶಕ ಮಹಮದ್ ಮನ್ಸೂರ್ ಖಾನ್ನಿಂದ ದೊಡ್ಡ ಮೊತ್ತದ ಹಣ ಪಡೆದ ಆರೋಪಕ್ಕೆ ರೋಷನ್ ಬೇಗ್ ಅವರ ಮೇಲಿದೆ.
ಬಂಧನಕ್ಕೆ ಮುನ್ನ ಬಿಡುಗಡೆ ಮಾಡಿದ್ದ ಆಡಿಯೊ ಧ್ವನಿಸುರುಳಿಯಲ್ಲಿ, ‘ಶಿವಾಜಿನಗರ ಶಾಸಕರು ತಮ್ಮಿಂದ ಹಣ ಪಡೆದು ವಾಪಸ್ ಕೊಡದೆ ವಂಚಿಸಿದ್ದಾರೆ’ ಎಂದು ಮನ್ಸೂರ್ ಖಾನ್ ಆರೋಪಿಸಿದ್ದರು. ಈ ಸಂಬಂಧ ರೋಷನ್ ಬೇಗ್ ಅವರನ್ನು ಎಸ್ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು.
ಪುನಃ ವಿಚಾರಣೆಗೆ ಬರುವಂತೆ ಎರಡು ಸಲ ನೋಟಿಸ್ ನೀಡಲಾಗಿತ್ತು. ಪುನಃ ಆಗಸ್ಟ್ 13ರಂದು ವಿಚಾರಣೆಗೆ ಬರುವಂತೆ ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಈ ಪ್ರಕರಣದಲ್ಲಿ ಪುಲಕೇಶಿ ನಗರದ ಎಸಿಪಿ ಆಗಿದ್ದ ರಮೇಶ್ ಕುಮಾರ್ ಅವರನ್ನು ಭಾನುವಾರ ವಿಚಾರಣೆ ಮಾಡಲಾಗಿದೆ. ಕಮರ್ಷಿಯಲ್ ಸ್ಟ್ರೀಟ್ ಇನ್ಸ್ಪೆಕ್ಟರ್ ಆಗಿದ್ದ ರಮೇಶ್ ಅವರನ್ನು ಮಂಗಳವಾರ ವಿಚಾರಣೆ ನಡೆಸಲಾಗುತ್ತಿದೆ ಎಂದೂ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.