ADVERTISEMENT

ಐಎಂಎ ಪ್ರಕರಣ: ಮನ್ಸೂರ್‌ ಖಾನ್‌ಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 19:30 IST
Last Updated 28 ಅಕ್ಟೋಬರ್ 2020, 19:30 IST
ಮನ್ಸೂರ್ ಖಾನ್
ಮನ್ಸೂರ್ ಖಾನ್   

ಬೆಂಗಳೂರು: ಐಎಂಎ ಕಂಪನಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮಹಮದ್ ಮನ್ಸೂರ್‌ ಖಾನ್‌ಗೆ ಹೈಕೋರ್ಟ್‌ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಜಾರಿ ನಿರ್ದೇಶನಾಲಯ(ಇ.ಡಿ) ದಾಖಲಿಸಿಕೊಂಡಿದ್ದ ಪ್ರಕರಣದಲ್ಲಿ ಜಾಮೀನು ನೀಡಲು ವಿಚಾರಣಾ ನ್ಯಾಯಾಲಯ ಆಗಸ್ಟ್‌ 18ರಂದು ನಿರಾಕರಿಸಿತ್ತು.

‘ಪೊಲೀಸ್ ತನಿಖೆ ಮುಕ್ತಾಯಗೊಂಡಿದೆ. 2019ರ ಆಗಸ್ಟ್ 1ರಿಂದಲೂ ಮನ್ಸೂರ್‌ ಖಾನ್ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ರಕ್ತನಾಳಗಳಲ್ಲಿ ಶೇ 100 ಬ್ಲಾಕ್ ಇತ್ತು.ಬೆನ್ನೆಲುಬು ಸವಕಳಿಯಿಂದ ಕಾಣಿಸಿಕೊಳ್ಳುವ ಬೆನ್ನುನೋವಿನಿಂದಲೂ ಬಳಲುತ್ತಿದ್ದಾರೆ’ ಎಂದು ಮನ್ಸೂರ್ ಪರ ವಕೀಲರು ತಿಳಿಸಿದರು. ಈ ಸಂಬಂಧ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ಅಲ್ಲಿನ ಮುಖ್ಯ ವೈದ್ಯಾಧಿಕಾರಿ ನೀಡಿರುವ ‍ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

‘₹4 ಸಾವಿರ ಕೋಟಿಯನ್ನು ಜನರಿಂದ ಸಂಗ್ರಹಿಸಿ ಅದರಲ್ಲಿ ₹1,323 ಕೋಟಿ ಹಿಂದಿರುಗಿಸಿದ್ದಾರೆ. ಈ ನಡುವೆ ₹209 ಕೋಟಿ ಮೌಲ್ಯದ ಆಸ್ತಿಯನ್ನು ಮನ್ಸೂರ್ ಖರೀದಿಸಿದ್ದಾರೆ. ಈ ಆಸ್ತಿಯನ್ನೂ ವಿಲೇ ಮಾಡುವ ಸಾಧ್ಯತೆ ಇದೆ ಮತ್ತು ಹೂಡಿಕೆದಾರರ ಹಿತಾಸಕ್ತಿಗೆ ಧಕ್ಕೆಯಾಗಲಿದೆ’ ಎಂದು ಇ.ಡಿ ‍ಪರ ವಾದ ಮಂಡಿಸಿದ ವಿಶೇಷ ವಕೀಲ ಮಧುಕರ ದೇಶಪಾಂಡೆ ಹೇಳಿದರು.

ADVERTISEMENT

‘ಮುಖ್ಯ ವೈದ್ಯಾಧಿಕಾರಿ ನೀಡಿರುವ ಪತ್ರದ ಪ್ರಕಾರ, ಮನ್ಸೂರ್‌ ಖಾನ್‌ಗೆ ನಿರಂತರ ವೈದ್ಯಕೀಯ ಮೇಲ್ವಿಚಾರಣೆ ಅಗತ್ಯವಿದೆ. ವಿವಿಧ ದರ್ಜೆಯ ಪರೀಕ್ಷೆ ಮತ್ತು ಚಿಕಿತ್ಸೆ ಅಗತ್ಯವಿದೆ ಎಂಬುದನ್ನು ವೈದ್ಯಾಧಿಕಾರಿ ಸ್ಪಷ್ಟವಾಗಿ ಅವಲೋಕನ ಮಾಡಿದ್ದಾರೆ ಎಂಬುದನ್ನು ಗಮನಿಸುವುದು ಸೂಕ್ತವಾಗಿದೆ. ಈ ಅಂಶವನ್ನು ಜಾಮೀನು ನೀಡಲು ಪರಿಗಣಿಸಬಹುದು’ ಎಂದು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್‌ಕುಮಾರ್ ಅಭಿಪ್ರಾಯಪಟ್ಟರು.

‘ವಿಚಾರಣಾ ನ್ಯಾಯಾಲಯದ ತೃಪ್ತಿಗಾಗಿ ₹5 ಲಕ್ಷ ಮೊತ್ತದ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಮತ್ತೊಬ್ಬರ ಶ್ಯೂರಿಟಿ ನೀಡಬೇಕು. ಆಸ್ತಿಗಳನ್ನು ವಿಲೇ ಮಾಡಬಾರದು. ಕಾಯಿಲೆ ವಿಷಯದಲ್ಲಿ ವಿಚಾರಣಾ ನ್ಯಾಯಾಲಯದ ವ್ಯಾಪ್ತಿಯಿಂದ ಹೊರ ಹೋಗಬೇಕಿದ್ದರೆ, ಆ ನ್ಯಾಯಾಲಯದ ಅನುಮತಿ ಪಡೆಯಬೇಕು. ಅನುಮತಿ ನೀಡುವಾಗ ವಿಚಾರಣಾ ನ್ಯಾಯಾಲಯ ಷರತ್ತುಗಳನ್ನು ವಿಧಿಸಬಹುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.