ADVERTISEMENT

ಬೆಳಗಾವಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಸಂಘರ್ಷ,ಲಾಠಿ ಚಾರ್ಜ್ ಮಾಡಿದ ಪೊಲೀಸರು

ಪಂಚಮಸಾಲಿ ಮೀಸಲಾತಿ ಹೋರಾಟ: ಪೊಲೀಸರ ಮೇಲೆ ಕಲ್ಲು ತೂರಾಟ, ಚಪ್ಪಲಿ ಎಸೆತ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2024, 10:55 IST
Last Updated 10 ಡಿಸೆಂಬರ್ 2024, 10:55 IST
   

ಬೆಳಗಾವಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ನಡೆದ ಮೀಸಲಾತಿ ಹೋರಾಟ ಭಾರಿ ಸಂಘರ್ಷಕ್ಕೆ ದಾರಿ ಮಾಡಿತು. ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಹಿಗ್ಗಾಮುಗ್ಗಾ ಲಾಠಿ ಬೀಸಿದರು. ರೊಚ್ಚಿಗೆದ್ದ ಜನ ಪೊಲೀಸರ ಮೇಲೆ ಕಲ್ಲು, ಚಪ್ಪಲಿ‌ ತೂರಿದರು.

ಇದರಿಂದ ಕೆಲವು ಪ್ರತಿಭಟನಾಕಾರರ ತಲೆ ಒಡೆದು ರಕ್ತ ಚೆಲ್ಲಿತು. ಹಲವರ ಕೈ ಕಾಲುಗಳಿಗೆ ಪೆಟ್ಟುಬಿದ್ದಿತು. ಹಲವರ ಬಟ್ಟೆಗಳು ಹರಿದವು.

ಅಷ್ಟೊತ್ತಿಗೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೆದ್ದಾರಿಗೆ ಬಂದು ಅಲ್ಲೇ ಧರಣಿ ಕುಳಿತರು. ಪೊಲೀಸರು ಹಲವರನ್ನು ಬಸ್ಸಿನಲ್ಲಿ ಹತ್ತಿಸಿದರು.

ADVERTISEMENT

ಮುಂದೆ ಧಾವಿಸಿದ ಬಸನಗೌಡ ಪಾಟೀಲ ಯತ್ನಾಳ, ಈರಣ್ಣ ಕಡಾಡಿ, ಅರವಿಂದ ಬೆಲ್ಲದ ಮುಂತಾದವರು ಪೊಲೀಸ್ ವಾಹನಗಳನ್ನು ಬಿಗಿಯಾಗಿ ಹಿಡಿದು ಎದುರಿಗೇ ನಿಂತರು. ಪೊಲೀಸರು‌ ಅನಿವಾರ್ಯವಾಗಿ ಎಲ್ಲರನ್ನೂ ಕೆಳಗೆ ಇಳಿಸಿದರು.

ಸ್ಥಳಕ್ಕೆ ಬಾರದ ಸಿ.ಎಂ; ಆಕ್ರೋಶ

2ಎ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನಾ ಸಮಾವೇಶ ನಡೆಸಿದ್ದ ಪಂಚಮಸಾಲಿಗರು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಳಕ್ಕೆ ಬಾರದ್ದನ್ನು ಖಂಡಿಸಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದರು. ಮಧ್ಯಾಹ್ನದಿಂದ ಶಾಂತಿಯುತವಾಗಿ ಜನರನ್ನು ತಡೆದು ನಿಲ್ಲಿಸಿದ್ದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಸಂಘರ್ಷ ಯಾತ್ರೆಯನ್ನು ಘೋಷಿಸಿದರು.

ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಪೊಲೀಸರು ಮೂರು ಬಾರಿ ಲಾಠಿ ಬೀಸಿದರು. ಕೆಲವರಿಗೆ ತಲೆ ಒಡೆದು ರಕ್ತ ಸೋರಿತು. ಮತ್ತೆ ಕೆಲವರ ಮೈ-ಕಾಲುಗಳಿಗೆ ಗಾಯಗಳಾದವು. ಆದರೂ ಜನ ಹೆದ್ದಾರಿಯಲ್ಲಿ ಓಡಾಡಿದರು‌. ಪೊಲೀಸರು ಮತ್ತು ಹೋರಾಟಗಾರರ ನಡುವಿನ ಸಂಘರ್ಷ ನಿರಂತರವಾಗಿ ಮುಂದುವರಿಯಿತು.

ಹೆದ್ದಾರಿಯಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಪೊಲೀಸರು ಬ್ಯಾರಿಕೇಡ್ ಅಡ್ಡ ಇಟ್ಟು, ವಾಹನಗಳನ್ನು ನಿಲ್ಲಿಸಿ ಜನರನ್ನು ತಡೆದರು. ಹೆದ್ದಾರಿ ತುಂಬಾ ಜನ ಹರಿದಾಡಿದರು. ನಾಲ್ಕು ಕಡೆ ವಾಹನಗಳ ಸಂಚಾರ ಸಂಪೂರ್ಣ ಬಂದ್ ಮಾಡಿದ್ದರು. ಇದರ ನಡುವೆ ಸ್ವಾಮೀಜಿ ಅವರನ್ನು ಭೇಟಿ ಮಾಡಲು ಹೋದ ಹಿರಿಯ ಅಧಿಕಾರಿಗಳು, ಕೆಲವೇ ಜನರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಆಗುವಂತೆ ಮನವಿ ಮಾಡಿಕೊಂಡರು. ಇದಕ್ಕೆ ಒಪ್ಪದ ಸ್ವಾಮೀಜಿ ನಾವು ಶಾಂತಿಯುತವಾಗಿ ಸುವರ್ಣಸೌಧ ಮುಂದೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ತಿಳಿಸಿದರು.

ಇದಕ್ಕೂ ಮೊದಲು ಸಚಿವರಾದ ಎಚ್.ಸಿ.ಮಹಾದೇವಪ್ಪ, ವೆಂಕಟೇಶ,‌ ಲಕ್ಷ್ಮೀ ಹೆಬ್ಬಾಳ್ಕರ್, ಡಿ.ಸುಧಾಕರ್ ಅವರು ಪ್ರತಿಭಟನಾ ವೇದಿಕೆಗೆ ಬಂದು ಮುಖ್ಯಮಂತ್ರಿಗಳ ಪರವಾಗಿ ಮನವಿ ಮಾಡಿದರು. ಹೋರಾಟದ ಉದ್ದೇಶವನ್ನು ಸಿಎಂ ಗಮನಕ್ಕೆ ತರುತ್ತೇವೆ. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ತಿಳಿಸಿದರು‌. ಆಗ ಜನಸ್ತೋಮದಿಂದ ಭಾರಿ ಪ್ರಮಾಣದ ಕೂಗಾಟ, ಚೀರಾಟ, ಶಿಳ್ಳೆ-ಕೇಕೆಗಳು ಆರಂಭವಾದವು.

ಮುಖ್ಯಮಂತ್ರಿ ಸ್ಥಳಕ್ಕೆ ಬರಬೇಕು. ಇಲ್ಲವೇ ನಾವೇ ಸೌಧಕ್ಕೆ ಹೋಗುತ್ತೇವೆ ಎಂದು ಘೋಷಣೆ ಮೊಳಗಿಸಿದರು‌‌. ಆಗ ಸೌಧಕ್ಕೆ ಹೋಗೋಣ ನಡೆಯಿರಿ ಎಂದು ಸ್ವಾಮೀಜಿ ಹೇಳುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನ ನಾ ಮುಂದು, ತಾ ಮುಂದು ಎಂದು ಮುನ್ನುಗ್ಗಿದರು. ದಾರಿ, ಹೊಲ, ಸಿಕ್ಕ ಸಿಕ್ಕ ಜಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ತಲುಪಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.