ADVERTISEMENT

ಪ್ರದೀಪ್ ಆತ್ಮಹತ್ಯೆ: ನಾಲ್ವರ ವಿಚಾರಣೆ, ಅರವಿಂದ ಲಿಂಬಾವಳಿ ವಿಚಾರಣೆ ಬಾಕಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2023, 19:45 IST
Last Updated 12 ಜನವರಿ 2023, 19:45 IST
ಅರವಿಂದ ಲಿಂಬಾವಳಿ
ಅರವಿಂದ ಲಿಂಬಾವಳಿ   

ರಾಮನಗರ: ಬೆಂಗಳೂರಿನ ಉದ್ಯಮಿ ಪ್ರದೀಪ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈವರೆಗೆ ನಾಲ್ವರನ್ನು ವಿಚಾರಣೆಗೆ ಒಳಪಡಿಸಿದ್ದು, ಪ್ರಕರಣದ ಮತ್ತೊಬ್ಬ ಆರೋಪಿ, ಶಾಸಕ ಅರವಿಂದ ಲಿಂಬಾವಳಿ ವಿಚಾರಣೆ ಬಾಕಿ ಇದೆ.

ಮೊದಲ ಆರೋಪಿ ಗೋಪಿ ತಲೆಮರೆಸಿಕೊಂಡಿದ್ದಾರೆ. ಉಳಿದ ಐವರಿಗೆ ಕಗ್ಗಲೀಪುರ ಠಾಣೆ ಪೊಲೀಸರು ನೋಟಿಸ್ ನೀಡಿದ್ದರು. 2ನೇ ಆರೋಪಿ ಸೋಮಯ್ಯ, 4ನೇ ಆರೋಪಿ ರಮೇಶ್ ರೆಡ್ಡಿ, 5ನೇ ಆರೋಪಿ ಜಯರಾಮ್‌ ರೆಡ್ಡಿ ಹಾಗೂ 6ನೇ ಆರೋಪಿ ರಾಘವ ಭಟ್ ಅವರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿದ್ದಾರೆ. ಗೋಪಿ ಹೇಳಿಕೆ ಪಡೆದುಕೊಂಡ ಬಳಿಕ ಅರವಿಂದ ಲಿಂಬಾವಳಿ ಅವರ ಹೇಳಿಕೆ ಪಡೆಯುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಪ್ರದೀಪ್‌ ಬ್ಯಾಂಕ್‌ ಖಾತೆಯ ವಿವರಗಳನ್ನು ಪೊಲೀಸರು ಪಡೆದಿದ್ದು, ಯಾರಿಗೆಲ್ಲ ಹಣ ಸಂದಾಯ ಆಗಿತ್ತು ಮತ್ತು ಯಾರಿಂದ ಎಷ್ಟು ಹಣ ವಾಪಸ್ ಬಂದಿತ್ತು ಎಂಬ ಮಾಹಿತಿ ಕಲೆ ಹಾಕಿದ್ದಾರೆ. ಇದೊಂದು ಸಿವಿಲ್‌ ವ್ಯಾಜ್ಯದ ರೀತಿ ಇರುವುದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಪ್ರದೀಪ್‌ ಹಾಗೂ ಗೋಪಿ, ಸೋಮಯ್ಯ ಕ್ಲಬ್‌ ವೊಂದರ ಪಾಲುದಾರರಾಗಿದ್ದರು. ಕೋವಿಡ್ ಸಂದರ್ಭ ಕ್ಲಬ್‌ನ ವ್ಯವಹಾರದಲ್ಲಿ ನಷ್ಟ ಉಂಟಾಗಿದ್ದು, ಈ ಕಾರಣಕ್ಕೆ ಪ್ರದೀಪ್‌ಗೆ ಹಣ ಸಂದಾಯ ಆಗಿರಲಿಲ್ಲ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.