ಬೆಂಗಳೂರಿನಲ್ಲಿ ನಡೆದ ವಿಜಯೋತ್ಸವದ ಸಂದರ್ಭದಲ್ಲಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರಜ್ಞಾಹೀನರಾದ ಮಹಿಳೆಯನ್ನು ಆಂಬುಲೆನ್ಸ್ನಲ್ಲಿ ಒಯ್ದರು.
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಬೆಂಗಳೂರು: ‘ಆರ್ಸಿಬಿ ವಿಜಯೋತ್ಸವಕ್ಕೆ ಹೋಗುತ್ತೇವೆ ಎಂದು ನಾವು ಯಾರೂ ಮನೆಯಲ್ಲಿ ಹೇಳಿಲ್ಲ. ಈಗ ನೋಡಿದರೆ ಹೀಗಾಗಿದೆ. ನಮ್ಮ ಸ್ನೇಹಿತ ಕುಸಿದು ಬಿದ್ದಿದ್ದ. ಅವನು ಮಾತನಾಡುತ್ತಿರಲಿಲ್ಲ. ಇವರು (ವೈದ್ಯರು) ನೋಡಿದರೆ, ‘ಬ್ರಾಟ್ ಡೆಡ್’ ಎಂದು ಹೇಳುತ್ತಿದ್ದಾರೆ. ಏನು ಮಾಡುವುದು ಎಂದು ಗೊತ್ತಾಗುತ್ತಿಲ್ಲ...’
ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತದಲ್ಲಿ ಗಾಯಗೊಂಡವರನ್ನು ಚಿಕಿತ್ಸೆಗೆ ಸೇರಿಸಲಾಗಿದ್ದ ವೈದೇಹಿ ಆಸ್ಪತ್ರೆ ಎದುರು ನಿಂತಿದ್ದ ಕಾಲೇಜು ವಿದ್ಯಾರ್ಥಿಯೊಬ್ಬನ ಚಡಪಡಿಕೆಯಿದು. ಇನ್ನೂ ಮೂರ್ನಾಲ್ಕು ವಿದ್ಯಾರ್ಥಿಗಳು ಆತನ ಜತೆಗೆ ದಿಗ್ಭ್ರಾಂತರಾಗಿ ನಿಂತಿದ್ದರು. ‘ಬ್ರಾಟ್ ಡೆಡ್’ ಎಂದು ವೈದ್ಯರು ಹೇಳಿದ್ದನ್ನು ಹೇಗೆ ಅರಗಿಸಿಕೊಳ್ಳಬೇಕೆಂದು ಗೊತ್ತಾಗದೆ ನಿಂತಿದ್ದರು.
ತುಂಬಿದ ಕಣ್ಣಾಲಿಗಳು, ಉಬ್ಬಿದ ಗಂಟಲು, ಏನು ಮಾಡಬೇಕೆಂದು ದಿಕ್ಕುತೋಚದ ಸ್ಥಿತಿ. ಅತೀವ ಸಂಚಾರ ದಟ್ಟಣೆಯ ಮಲ್ಯ ರಸ್ತೆಯಲ್ಲೂ ಸ್ಮಶಾನ ಮೌನ. ಅಷ್ಟರಲ್ಲೇ ಹೊರಬಂದ ವೈದ್ಯರೊಬ್ಬರು ಮತ್ತೊಂದು ಯುವಕರ ಗುಂಪಿನತ್ತ ಹೋಗಿ, ಏನೋ ಮಾಹಿತಿ ನೀಡಿದರು. ಆ ಗುಂಪಿನಲ್ಲಿದ್ದ ಒಂದಿಬ್ಬರು ಯುವಕ ಯುವತಿಯರು ಕುಸಿದು ಕೂತರು.
ಅವರತ್ತ ನುಗ್ಗಿದ ಸುದ್ದಿವಾಹಿನಿಗಳ ಕ್ಯಾಮೆರಾಮನ್ಗಳನ್ನು ತಡೆದ ಯುವಕನೊಬ್ಬ, ‘ದಯವಿಟ್ಟು ಶೂಟ್ ಮಾಡಬೇಡಿ ಸರ್. ನಮ್ಮ ಸ್ನೇಹಿತೆ ನಮ್ಮೊಂದಿಗೆ ಬಂದಿದ್ದಾಳೆ ಎಂದು ಅವರ ಅಪ್ಪ–ಅಮ್ಮನಿಗೆ ಗೊತ್ತಿಲ್ಲ. ಟಿ.ವಿಯಲ್ಲಿ ನೋಡಿದರೆ ಗಾಬರಿಯಾಗುತ್ತಾರೆ. ನಾವು ಹೇಗೋ ತಿಳಿಸುತ್ತೇವೆ’ ಎಂದು ಕೈಮುಗಿದ.
ಆ ಹೊತ್ತಿಗೆ ಕಸ್ತೂರಬಾ ರಸ್ತೆ ಕಡೆಯಿಂದ ಬಂದ ಕಾರೊಂದು ಆಸ್ಪತ್ರೆಯ ತುರ್ತು ವಿಭಾಗದ ಎದುರು ನಿಂತಿತು. ಕಾರಿನಿಂದಿಳಿದ ಯುವಕರು, ಯುವತಿಯೊಬ್ಬಳನ್ನು ಹೊತ್ತು ಆಸ್ಪತ್ರೆಯೊಳಕ್ಕೆ ಹೋದರು. ಆಕೆಯ ಕಾಲು ತಿರುಚಿಕೊಂಡಿತ್ತು. ಅದರ ಬೆನ್ನಲ್ಲೇ ಮತ್ತೊಂದು ಕಾರಿನಲ್ಲಿ ಇನ್ನೊಬ್ಬ ಗಾಯಾಳುವನ್ನು ಕರೆತರಲಾಯಿತು.
ಈ ವೇಳೆಗೆ ಹೊರಬಂದ ಆಸ್ಪತ್ರೆಯ ವೈದ್ಯಾಧಿಕಾರಿ ಹುಮೇರಿ, ‘16 ಗಾಯಾಳುಗಳನ್ನು ಇಲ್ಲಿಗೆ ಕರೆತರಲಾಗಿದೆ. ಅವರಲ್ಲಿ ನಾಲ್ವರು ಇಲ್ಲಿಗೆ ಬರುವ ಮುನ್ನವೇ ಮೃತಪಟ್ಟಿದ್ದರು. ಇನ್ನುಳಿದವರ ಸ್ಥಿತಿ ಸ್ಥಿರವಾಗಿದೆ’ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ.ಪರಮೇಶ್ವರ ಅವರು ಗಾಯಾಳುಗಳ ಭೇಟಿಗೆ ಬಂದಾಗ, ಆಸ್ಪತ್ರೆ ಎದುರು ನೂರಾರು ಜನರು ಸೇರಿದ್ದರು. ಮುಖ್ಯಮಂತ್ರಿ, ಗೃಹ ಸಚಿವ ಮತ್ತು ಅಧಿಕಾರಿಗಳ ದಂಡು ಅಲ್ಲಿಂದ ಹೊರಟರು. ನೂರಾರು ಮಂದಿ ಇದ್ದರೂ ಅಲ್ಲಿ ಮೌನ ಮಡುಗಟ್ಟಿತ್ತು.
ಆನಂತರವೂ ಆಂಬುಲೆನ್ಸ್ಗಳು ಬರುವುದು ನಿಲ್ಲಲಿಲ್ಲ. ಜನರು ಮತ್ತು ವಾಹನಗಳಿಂದ ಕ್ಕಿಕ್ಕಿರಿದು ತುಂಬಿದ್ದ ರಸ್ತೆಯಲ್ಲಿ ಆರ್ಸಿಬಿ ಜರ್ಸಿ ತೊಟ್ಟಿದ್ದ ನಾಲ್ಕಾರು ಯುವಕರು ಪ್ರತಿ ವಾಹನಕ್ಕೂ ಬಡಿದು, ‘ಜಾಗ ಬಿಡಿ. ಜಾಗ ಬಿಡಿ’ ಎಂದು ಓಡುತ್ತಿದ್ದರು. ಅವರು ಬಿಡಿಸಿಕೊಟ್ಟ ಜಾಗದಲ್ಲೇ ಆಂಬುಲೆನ್ಸ್ ಒಂದು ಆಸ್ಪತ್ರೆ ಬಳಿಗೆ ಬಂತು. ಅದರ ಸೈರನ್ ನಿಲ್ಲುತ್ತಿದ್ದಂತೆಯೇ, ಕಸ್ತೂರಬಾ ರಸ್ತೆ ಕಡೆಯಿಂದ ಮತ್ತೊಂದು ಆಂಬುಲೆನ್ಸ್ನ ಸದ್ದು ಕೇಳಲಾರಂಭಿಸಿತು.
ಕಾಲ್ತುಳಿತದಲ್ಲಿ ಎಂಜಿನಿಯರ್ ಸಾವು
ಕೆ.ಆರ್.ಪೇಟೆ: ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ ತಾಲ್ಲೂಕಿನ ರಾಯಸಮುದ್ರ ಗ್ರಾಮದ ಯುವಕ ಪೂರ್ಣಚಂದ್ರ ಮೃತಪಟ್ಟಿದ್ದಾರೆ.
ಅವರು ಗ್ರಾಮದ ಶಿಕ್ಷಕ ಆರ್.ಬಿ. ಚಂದ್ರು -ಕಾಂತಾಮಣಿ ದಂಪತಿಯ ಪುತ್ರ. ಮೈಸೂರಿನ ಖಾಸಗಿ ಕಂಪನಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿದ್ದರು. ಕ್ಷೇತ್ರದ ಶಾಸಕ ಎಚ್.ಟಿ. ಮಂಜು ನಿವಾಸಕ್ಕೆ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.